ಕಕ್ಕೇರಾ: ಸಮೀಪದ ಪೂಲಬಾವಿ ಗ್ರಾಮದ ಬಲಭೀಮೇಶ್ವರ ಜಾತ್ರೋತ್ಸವ ಅಂಗವಾಗಿ ಭಾನುವಾರ ಸಂಜೆ ಸಂಭ್ರಮದ ರಥೋತ್ಸವ ಜರುಗಿತು.
ಶನಿವಾರ ರಾತ್ರಿ ದೇವರ ಗಂಗಸ್ಥಳ ನಡೆಯಿತು. ಪ್ರಭಾವತಿ ಹಾಗೂ ಸಂಗಡಿಗರಿಂದ ಅಹೋರಾತ್ರಿ ಭಜನೆ ನಡೆಯಿತು. ಜಾತ್ರೆ ಅಂಗವಾಗಿ ಆಯೋಜಿಸಿದ್ದ ಕಬಡ್ಡಿ ಟೂರ್ನಿ ಗಮನ ಸೆಳೆಯಿತು.
ಭಾನುವಾರ ಬೆಳಿಗ್ಗೆ ಭಕ್ತರಿಂದ ದೀಡ್ ನಮಸ್ಕಾರ, ಛತ್ರಿ, ಗಂಟೆಗಳ ಅರ್ಪಣೆ, ನೈವೇದ್ಯ, ಕಾಯಿ ಕರ್ಪೂರ ಅರ್ಪಿಸುವ ಕಾರ್ಯಕ್ರಮಗಳ ಜತೆಗೆ ಡೊಳ್ಳು ವಾದ್ಯಗಳ ನಡುವೆ ಪಲ್ಲಕ್ಕಿ ಉತ್ಸವ ಜರುಗಿತು. ನಂತರ ಭೀಮಣ್ಣ ಮುತ್ಯಾರಿಂದ ದೇವರ ಹೇಳಿಕೆ ಮುಗಿದ ಮೇಲೆ ಚಪ್ಪಾಳೆ ತಟ್ಟಿ ಸಂಭ್ರಮಿಸಿದರು.
ಸಂಜೆ ಭೀಮಣ್ಣ ಮುತ್ಯಾ ರಥ ಎಳೆಯುವುದಕ್ಕೆ ಚಾಲನೆ ನೀಡಿದರು. ನೆರೆದ ಸಹಸ್ರಾರು ಭಕ್ತ ಸಮೂಹ ರಥಕ್ಕೆ ಉತ್ತತ್ತಿ, ಹೂ ಅರ್ಪಿಸಿ ಪೂಲಬಾವಿ ಬಲಭೀಮೇಶ್ವರ ಮಹಾರಾಜಕೀ ಜೈ... ಎಂದು ಜೈಕಾರ ಹಾಕುತ್ತಾ, ಸಿಡಿಮದ್ದುಗಳ ಚಿತ್ತಾರದ ಮಧ್ಯೆ ರಥ ಎಳೆದು ಕೃತಾರ್ಥರಾದರು.
ಕಳೆದ ಎರಡು ವರ್ಷಗಳಿಂದ ಕೋವಿಡ್ ಕಾರಣ ಜಾತ್ರೆಗೆ ಬರಲು ಸಾಧ್ಯವಾಗಿರಲಿಲ್ಲ. ಈ ವರ್ಷ ರಥೋತ್ಸವದಲ್ಲಿ ಭಾಗಿಯಾಗಿದ್ದು, ತೀವ ಸಂತಸ ತಂದಿದೆ ಎಂದು ಭಕ್ತರೊಬ್ಬರು ತಿಳಿಸಿದರು.