ಯಾದಗಿರಿ: ‘ಇಡೀ ರಾಜ್ಯದಲ್ಲಿ ಒಬ್ಬರೂ ಮುಸ್ಲಿಂ ಸಂಸದರು ಇಲ್ಲ. ಹಾಗಾಗಿ, ಈ ಬಾರಿ ಜಾತ್ಯತೀತ ಪಕ್ಷಗಳು ಮುಸ್ಲಿಂ ಅಭ್ಯರ್ಥಿಗಳಿಗೆ ಆದ್ಯತೆ ನೀಡಿಬೇಕು’ ಎಂದು ಹೈದರಾಬಾದ್ ಕರ್ನಾಟಕ ಮುಸ್ಲಿಮರ ರಾಜಕೀಯ ವೇದಿಕೆ ಜಿಲ್ಲಾ ಅಧ್ಯಕ್ಷ ಡಾ.ರಫಿ ಸೌದಾಗರ ಆಗ್ರಹಿಸಿದರು.
ನಗರದಲ್ಲಿ ಶನಿವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ,‘ರಾಜ್ಯದಲ್ಲಿ ರಾಜಕೀಯ ಪ್ರಾತಿನಿಧ್ಯ ಅಲ್ಪಸಂಖ್ಯಾತರಿಗೆ ಸಿಗುತ್ತಿಲ್ಲ. ಒಂದು ದಶಕದಿಂದಲೂ ಅಲ್ಪಸಂಖ್ಯಾತ ಸಮುದಾಯ ಒಬ್ಬರೂ ಸಂಸದರಾಗಿಲ್ಲ. ರಾಜಕೀಯ ಪ್ರಾತಿನಿಧ್ಯ ಸಿಗದೇ ಇರುವುದರಿಂದ ಅಲ್ಪಸಂಖ್ಯಾತರಿಗೆ ಅನ್ಯಾಯವಾಗಿದೆ’ ಎಂದು ಆರೋಪಿಸಿದರು.
‘ರಾಜ್ಯದಲ್ಲಿ ಶೇ 19ರಷ್ಟು ಮುಸ್ಲಿಮರಿದ್ದರೂ ರಾಜ್ಯದ ವಿಧಾನಸಭೆಯಲ್ಲಿ ಸೂಕ್ತ ಪ್ರಾತಿನಿಧ್ಯ ಸಿಕ್ಕಿಲ್ಲ. ಪಕ್ಷಗಳು ಮುಸ್ಲಿಂ ಅಭ್ಯರ್ಥಿಗಳಿಗೆ ಟಿಕೆಟ್ ನೀಡದೇ ಇರುವುದು ಇದಕ್ಕೆ ಪ್ರಮುಖ ಕಾರಣವಾಗಿದೆ. ಕ್ಷೇತ್ರ ಪುನರ್ ವಿಂಗಡನಾ ಸಮಿತಿ ರಚಿಸಿದಾಗ ಅದರಲ್ಲಿ ಒಬ್ಬ ಅಲ್ಪಸಂಖ್ಯಾತರ ಪ್ರತಿನಿಧಿ ಇರಬೇಕು. ಮುಸ್ಲಿಂ ಬಾಹುಳ್ಯ ಇರುವಲ್ಲಿ ಮುಸ್ಲಿಮರಿಗೆ ಟಿಕೆಟ್ ನೀಡಬೇಕು. ಬಜೆಟ್ ನಲ್ಲಿ ಅಲ್ಪಸಂಖ್ಯಾತರಿಗೆ ಮೀಸಲಿಡುವ ಅನುದಾನ ಕಡಿತಗೊಳಿಸಬಾರದು. ಕೇರಳ ಮಾದರಿಯಂತೆ ಶೇ 12 ಮೀಸಲಾತಿಯನ್ನು ಅಲ್ಪಸಂಖ್ಯಾತರಿಗೆ ನಿಗದಿಪಡಿಸಬೇಕು. ವಕ್ಫ್ ಆಸ್ತಿ ರಕ್ಷಿಸಬೇಕು’ ಎಂದು ಸರ್ಕಾರವನ್ನು ಒತ್ತಾಯಿಸಿದರು.
ತಂಜಮುಲ್ ಮುಸ್ಲಿಮಿನ್ ಬೈತುಲ್ ಮಾಲ್ ಅಧ್ಯಕ್ಷ ಲಾಯಕ್ ಹುಸೇನ್ ಬಾದಲ್, ಕಲಬುರ್ಗಿ ಅಧ್ಯ್ಯಕ್ಷ ಅಬ್ದುಲ್ ಅಲೀಂ, ಷಹನವಾಜ್ ಅಹಮ್ಮದ್ ಕಲ್ಬುರ್ಗಿ, ವಕ್ಫ್ ಜಿಲ್ಲಾ ಅಧ್ಯಕ್ಷ ಮಹಮ್ಮದ್ ರಫಿ, ಹಾಜಿ ಶಮಸುಜ್ಜಮಾ, ಶೇಖ್ ಜಹೀರುದ್ದಿನ್ ಸವೇರಾ, ಮನ್ಸೂರ್ ಅಹಮ್ಮದ್ ಅಫಘಾನ ಇದ್ದರು.