ವಾಡಿ: ‘ರಾಜ್ಯ ಸರ್ಕಾರ ಸಂಪೂರ್ಣ ಭ್ರಷ್ಟಾಚಾರದಲ್ಲಿ ತೊಡಗಿದ್ದು ₹1 ಕೋಟಿ ವೆಚ್ಚದ ರಸ್ತೆ ನಿರ್ಮಾಣ ಮಾಡಬೇಕಾದರೆ ಮೊದಲು ₹40 ಲಕ್ಷ ಕಮಿಷನ್ ಕೊಡಲೇಬೇಕಾಗಿದೆ. ಇದು ರಾಜ್ಯ ಸರ್ಕಾರದ ಭ್ರಷ್ಟಚಾರಕ್ಕೆ ಹಿಡಿದ ಕನ್ನಡಿ’ ಎಂದು ಶಾಸಕ ಪ್ರಿಯಾಂಕ್ ಖರ್ಗೆ ಟೀಕಿಸಿದರು.
ಹಲಕಟ್ಟಾ ಗ್ರಾಮದ ಯಾದಗಿರಿ ಮುಖ್ಯ ರಸ್ತೆಯಿಂದ ಆರ್.ಬಿ.ಚವ್ಹಾಣ್ ತಾಂಡಾವರೆಗೆ ₹178.91 ಲಕ್ಷ ವೆಚ್ಚದಲ್ಲಿ ಸಿಸಿ ರಸ್ತೆ ನಿರ್ಮಾಣಕ್ಕೆ ಅಡಿಗಲ್ಲು ನೆರವೇರಿಸಿ ಅವರು ಮಾತನಾಡುತ್ತಿದ್ದರು.
545 ಪಿಎಸ್ಐ ಹುದ್ದೆ ನೇಮಕಾತಿಯಲ್ಲಿ ವ್ಯಾಪಕ ಅಕ್ರಮ ನಡೆದಿದೆ. ಬಿಜೆಪಿ ನಾಯಕರೇ ಈ ಅಕ್ರಮದಲ್ಲಿ ಭಾಗಿಯಾಗಿದ್ದಾರೆ ಎನ್ನಲಾಗುತ್ತದೆ. 57,000 ಅಭ್ಯರ್ಥಿಗಳು ಪರೀಕ್ಷೆ ಬರೆದಿದ್ದರು. ಈಗ ಅವರ ಗತಿ ಏನಾಗಬೇಕು ? ಪ್ರಾಮಾಣಿಕವಾಗಿ ಪರೀಕ್ಷೆ ಬರೆದಿರುವವರ ಮುಂದಿನ ಕತೆ ಏನು ? ಎಂದು ಪ್ರಶ್ನಿಸಿದರು.
ನಾನು ಸಮಾಜಕಲ್ಯಾಣ ಸಚಿವನಾಗಿದ್ದ ಸಮಯದಲ್ಲಿ ದಾವಣಗೆರೆ ಜಿಲ್ಲೆ ಸೊರಗೊಂಡನಕೊಪ್ಪ ಗ್ರಾಮದಲ್ಲಿ ಸಂತ ಸೇವಲಾಲ್ ಆಶ್ರಮ ಅಭಿವೃದ್ದಿಗೆ ₹150 ಕೋಟಿ ಬಿಡುಗಡೆ ಮಾಡಿದ್ದೆ. ತಾಂಡಾ ಅಭಿವೃದ್ದಿ ನಿಗಮದಿಂದ 4500 ಟ್ಯಾಕ್ಸಿಗಳನ್ನು ಕೊಟ್ಟಿದ್ದೇವೆ, ತಾಂಡಾಗಳ ಅಭಿವೃದ್ದಿಗೆ ₹100 ಕೋಟಿ ಬಿಡುಗಡೆ ಮಾಡಿದ್ದೆ. ಈ ಸಲ ಬಿಜೆಪಿ ಸರ್ಕಾರ ಕೇವಲ 2 ಟ್ಯಾಕ್ಸಿ ಮಾತ್ರ ಬಿಡುಗಡೆ ಮಾಡಿದೆ. ಇದು ಅಭಿವೃದ್ದಿನಾ? ಎಂದು ಪ್ರಶ್ನಿಸಿದರು.