ಯಾದಗಿರಿ: ಕೃಷ್ಣಾ ಮೇಲ್ದಂಡೆ ಅಚ್ಚುಕಟ್ಟು ಪ್ರದೇಶದಲ್ಲಿ ಜಿಲ್ಲೆಯ ರೈತರು ಬೆಳೆದಿರುವ ಮೆಣಸಿನಕಾಯಿ ಮತ್ತು ಶೇಂಗಾ ಬೆಳೆಗೆ ಇನ್ನೂ ಒಂದು ವಾರ ಕಾಲುವೆ ನೀರು ಪೂರೈಸುವಂತೆ ಆಗ್ರಹಿಸಿ ಕರ್ನಾಟಕ ಪ್ರಾಂತ ರೈತ ಸಂಘ ಸೋಮವಾರ ಜಿಲ್ಲಾಧಿಕಾರಿ ಕಚೇರಿ ಎದುರು ಇಳುವರಿ ಕುಸಿದಿರುವ ಶೇಂಗಾ ಬೆಳೆ ಪ್ರದರ್ಶಿಸಿ ಪ್ರತಿಭಟನೆ ನಡೆಸಿದರು.
ಬೀಜ, ಗೊಬ್ಬರ, ಕ್ರಿಮಿನಾಶಕ ಅಂತೆಲ್ಲಾ ರೈತರು ಸಾವಿರಾರು ಕೃಷಿಸಾಲ ಮಾಡಿ ರೈತರು ಬೆಳೆ ಬೆಳೆದಿದ್ದಾರೆ. ಆದರೆ, ಬೆಳೆ ಕೈಗೆ ಬರುವ ಸಂದರ್ಭದಲ್ಲಿ ನೀರು ಪೂರೈಕೆಯನ್ನು ಸ್ಥಗಿತಗೊಳಿಸಿದ್ದಾರೆ. ಇದರಿಂದ, ಶೇಂಗಾ ಮತ್ತು ಮೆಣಸಿನ ಕಾಯಿ ಬೆಳೆ ಇಳುವರಿ ಕುಸಿಯುವ ನೀತಿ ಎದುರಾಗಿದೆ. ಇನ್ನು ಒಂದು ವಾರ ನೀರು ಬೆಳೆಗಳಿಗೆ ದೊರೆಯದಿದ್ದರೆ ರೈತರಿಗೆ ಆತ್ಮಹತ್ಯೆವೊಂದೇ ದಾರಿ ಎಂದು ಪ್ರತಿಭಟನಕಾರರು ಆಕ್ರೋಶ ವ್ಯಕ್ತಪಡಿಸಿದರು.
‘ಕೃಷ್ಣಾ ಮೇಲ್ದಂಡೆ ಯೋಜನೆಯ ಆಲಮಟ್ಟಿ ಹಾಗೂ ನಾರಾಯಣಪುರ ಜಲಾಶಯಗಳು ಪ್ರತಿ ವರ್ಷ ತುಂಬಿದಾಗ ಲಕ್ಷ-ಲಕ್ಷ ಟಿಎಂಸಿ ನೀರು ನೆರೆ ರಾಜ್ಯದಗಳಿಗೆ ಹರಿಬಿಡಲಾಗಿದೆ. ಈ ವಿಷಯದಲ್ಲಿ ನೀರಾವರಿ ಸಲಹಾ ಸಮಿತಿಯ ಸಭೆಯ ತೀರ್ಮಾನವೂ ಅವೈಜ್ಞಾನಿಕವಾಗಿದೆ. ಮುಂಗಾರು ಬೆಳೆಗಳು ಬರಬೇಕಾದರೆ ಡಿಸೆಂಬರ್ ಜನವರಿಗೆ ಮಾತ್ರ. ಆದರೆ, ನ.14ಕ್ಕೆ ನೀರು ನಿಲ್ಲಿಸುವುದು ಕೃಷಿಕರ ಬದುಕನ್ನೇ ನಾಶ ಮಾಡಿದಂತಾಗುತ್ತದೆ. ಜಲಾಶಗಳಲ್ಲಿರುವ ನೀರನ್ನು ಕಟ್ಟುನಿಟ್ಟಾಗಿ ವಾರಬಂದಿ ಅನುಸರಿಸದೇ 25 ವರ್ಷಗಳಿಂದಲೂ ಬಿಡದೆ ಇರುವಷ್ಟು ಪ್ರಮಾಣದಲ್ಲಿ ನೀರನ್ನು ಈ ವರ್ಷ ನದಿಗೆ ಹರಿಸಿ ಪೋಲು ಮಾಡಲಾಗಿದೆ’ ಎಂದು ಆರೋಪಿಸಿದರು.
ಕೂಡಲೇ ಒಂದು ವಾರ ನಿರಂತರ ನೀರು ಪೂರೈಕೆಗೆ ಕ್ರಮ ಕೈಗೊಳ್ಳಬೇಕು. ನೀರು ಬಿಡದೇ ಹೋದಲ್ಲಿ ರೈತರ ಬೆಳೆ ಹಾನಿಗೆ ಅಧಿಕಾರಿಗಳನ್ನೇ ಹೊಣೆಗಾರರನ್ನಾಗಿ ಮಾಡಲಾಗುವುದು. ಇಳುವರಿ ಕುಸಿದಿರುವ ಶೇಂಗಾಬೆಳೆಗಾರರಿಗೆ ಪ್ರತಿ ಎಕರೆಗೆ ₹50 ಸಾವಿರ ಪರಿಹಾರ ನೀಡಲು ಕ್ರಮ ಕೈಗೊಳ್ಳಬೇಕು’ ಎಂದು ಆಗ್ರಹಿಸಿದರು.
ಕರ್ನಾಟಕ ಪ್ರಾಂತ ರೈತ ಸಂಘ ಅಧ್ಯಕ್ಷ ಚನ್ನಪ್ಪ ಆನೆಗುಂದಿ, ಎಸ್.ಎಂ.ಸಾಗರ್, ಭೀಮರಾಯ ಪೂಜಾರಿ, ಗೌಡಪ್ಪಗೌಡ ಮದರಕಿ, ಲಿಂಗಣ್ಣ ಬೋನಾಳ, ಬಸೀರ್ ಸಾಬ್ ತಿಪ್ಪನಳ್ಳಿ, ಶರಣಗೌಡ ಮದರಕಿ, ಬಸಣ್ಣ ಪೂಜಾರಿ ಪ್ರತಿಭಟನೆಯಲ್ಲಿ ಭಾಗವಹಿಸಿದ್ದರು.