ಯಾದಗಿರಿ: ಸಮಾಜ ಕಲ್ಯಾಣ ಇಲಾಖೆ, ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ, ಅಲ್ಪಸಂಖ್ಯಾತರ ಇಲಾಖೆಗಳ ಹಾಗೂ ಕರ್ನಾಟಕ ವಸತಿ ಶಿಕ್ಷಣಗಳ ಸಂಘದ ವ್ಯಾಪ್ತಿಯಲ್ಲಿರುವ ವಸತಿ ನಿಲಯಗಳ ಕಾರ್ಮಿಕರ ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಆಗ್ರಹಿಸಿ ಕರ್ನಾಟಕ ರಾಜ್ಯ ಸಂಯುಕ್ತ ವಸತಿನಿಲಯಗಳ ಕಾರ್ಮಿಕರ ಸಂಘದ ಕಾರ್ಯಕರ್ತರು ನಗರದ ಜಿಲ್ಲಾ ಪಂಚಾಯಿತಿ ಕಚೇರಿಯ ಮುಂದೆ ಬುಧವಾರದಿಂದ ಅನಿರ್ಧಿಷ್ಟಾವಧಿ ಧರಣಿ ಆರಂಭಿಸಿದ್ದಾರೆ.
ವಸತಿ ನಿಲಯಗಳಲ್ಲಿ ಅತಿ ಕಡಿಮೆ ಸಂಬಳಕ್ಕೆ ಕೆಸಲ ಮಾಡುತ್ತಿರುವ ಕಾರ್ಮಿಕರ ಬಾಕಿ ವೇತನ ಪಾವತಿಸುವುದು, ಪ್ರತಿ ತಿಂಗಳು ಅವರ ವೇತನದಿಂದ ಕಡಿತವಾಗುತ್ತಿರುವ ವಂತಿಗೆಯನ್ನು ಸರಿಯಾಗಿ ಅವರ ಇಪಿಎಫ್ ಮತ್ತು ಇ.ಎಸ್.ಐ. ಖಾತೆಗೆ ಜಮಾಮಾಡುವುದು, ನಿಯಮಗಳನ್ವಯ ದಿನಕ್ಕೆ 8 ಗಂಟೆಗಳು ಮಾತ್ರ ಕೆಲಸ, ಹೆಚ್ಚುವರಿ ಕೆಲಸಕ್ಕೆ ಹೆಚ್ಚುವರಿ ವೇತನ ನೀಡುವುದು, ವಾರದ ರಜೆ, ಸರ್ಕಾರಿ ರಜೆ ಮತ್ತು ಸಾಂದರ್ಭಿಕ ರಜೆ ನೀಡುವುದು ಮತ್ತು ರಜಾ ದಿನಗಳಲ್ಲಿ ಸೇವೆ ಪಡೆದರೆ ಅದಕ್ಕೆ ಸೂಕ್ತ ಹೆಚ್ಚುವರಿ ವೇತನ ನೀಡುವುದು ಮತ್ತು ಕಾರ್ಮಿಕರ ವೇತನವನ್ನು ಪ್ರತಿ ತಿಂಗಳ 5ನೇ ದಿನದೊಳಗೆ ಅವರ ಖಾತೆಗೆ ಜಮಾಮಾಡಬೇಕು ಎಂದು ಧರಣಿ ನಿರತರು ಆಗ್ರಹಿಸಿದ್ದಾರೆ.
ಬೇಡಿಕೆ ಗಳನ್ನು ಈಡೇರಿಸು ವವರೆಗೂ ಅನಿರ್ಧಿಷ್ಟಾವಧಿ ಅಹೋರಾತ್ರಿ ಧರಣಿ ಮುಂದುವರೆಯಲಿದೆ ಎಂದು ಸಂಘದ ಮುಖಂಡರು ಹೇಳಿದ್ದಾರೆ.
ಸಂಘದ ಜಿಲ್ಲಾ ಘಟಕದ ಅಧ್ಯಕ್ಷೆ ಡಿ.ಉಮಾದೇವಿ, ರಾಮಲಿಂಗಪ್ಪ ಬಿ.ಎನ್., ತಾಜುದ್ಧೀನ್, ಶರಣಪ್ಪ, ಶ್ರೀಕಾಂತ, ರಮೇಶ, ಮರಳಮ್ಮ, ಶ್ರೀದೇವಿ, ನಾಗಮ್ಮ, ಅಂಬಮ್ಮ, ಲಕ್ಷ್ಮೀ ಸೇರಿದಂತೆ ಸಂಘದ ಕಾರ್ಯಕರ್ತರು ಮತ್ತು ಸದಸ್ಯರು ಇದ್ದರು.