ಯಾದಗಿರಿ: ಸಮಾಜ ಕಲ್ಯಾಣ ಇಲಾಖೆ ಹಾಸ್ಟೆಲ್ ಕಾರ್ಮಿಕರ ಬಾಕಿ ವೇತನ ಬ್ಯಾಂಕ್ ಖಾತೆಗಳಿಗೆ ಜಮಾ ಮಾಡಲು ಒತ್ತಾಯಿಸಿ ಎಐಯುಟಿಯುಸಿ ಸಂಯೋಜಿತ ಕರ್ನಾಟಕ ರಾಜ್ಯ ಸಂಯುಕ್ತ ವಸತಿನಿಲಯಗಳ ಕಾರ್ಮಿಕರ ಸಂಘದ ನೇತೃತ್ವದಲ್ಲಿ ಜಿಲ್ಲಾ ಪಂಚಾಯಿತಿ ಕಚೇರಿ ಎದುರು ಪ್ರತಿಭಟನೆ ನಡೆಸಲಾಯಿತು.
ಯಾದಗಿರಿ ತಾಲ್ಲೂಕಿನ ಸಮಾಜ ಕಲ್ಯಾಣ ಇಲಾಖೆ ಮತ್ತು ಪರಿಶಿಷ್ಠ ವರ್ಗಗಳ ಕಲ್ಯಾಣ ಇಲಾಖೆ ವ್ಯಾಪ್ತಿಯಲ್ಲಿ ನಡೆಯುತ್ತಿರುವ ಮೆಟ್ರಿಕ್ ಪೂರ್ವ, ಮೆಟ್ರಿಕ್ ನಂತರದ ವಿದ್ಯಾರ್ಥಿ ಮತ್ತು ವಿದ್ಯಾರ್ಥಿನಿಯರ ವಸತಿ ನಿಲಯಗಳು ಮತ್ತು ಆಶ್ರಮ ಶಾಲೆಗಳಲ್ಲಿ ಸೇವೆ ಸಲ್ಲಿಸುತ್ತಿರುವ ಹೊರಗುತ್ತಿಗೆ ಕಾರ್ಮಿಕರ 4-5 ತಿಂಗಳ ಬಾಕಿ ವೇತನ ಸೆಪ್ಟೆಂಬರ್ 30 ರ ಒಳಗಾಗಿ ಪಾವತಿ ಮಾಡುವುದಾಗಿ ಅಧಿಕಾರಿಗಳು ನೀಡಿದ್ದ ಲಿಖಿತ ಭರವಸೆಯಲ್ಲಿ ಕೇವಲ ಒಂದು ತಿಂಗಳ ವೇತನ ಕಾರ್ಮಿಕರ ಬ್ಯಾಂಕ್ ಖಾತೆಗಳಿಗೆ ಪಾವತಿ ಮಾಡಿ ದುಡಿದ ಕಾರ್ಮಿಕರ ಸೇವೆಯನ್ನು ಅವಮಾನಗೊಳಿಸಿರುವ ಖಂಡಿಸಿದರು.
ಕೂಡಲೇ ಬಾಕಿ ವೇತನವನ್ನು ಕಾರ್ಮಿಕರ ಬ್ಯಾಂಕ್ ಖಾತೆಗಳಿಗೆ ಜಮಾ ಮಾಡಬೇಕು ಎಂದು ಜಿಲ್ಲಾಡಳಿತಕ್ಕೆ ಒತ್ತಾಯಿಸಿದರು.
ಕಳೆದ 4 ತಿಂಗಳಿಂದಲೂ ಸಮಾಜ ಕಲ್ಯಾಣ ಇಲಾಖೆ ಅಧಿಕಾರಿಗಳಿಗೆ ಮತ್ತು ಕಾರ್ಮಿಕ ಅಧಿಕಾರಿಗಳು ಸೇರಿದಂತೆ ಹಲವು ಬಾರಿ ಮನವಿ ಪತ್ರ ಸಲ್ಲಿಸಿದರೂ ಪ್ರಯೋಜನವಾಗದ ಕಾರಣ ಜಿಲ್ಲಾ ಪಂಚಾಯಿತಿ ಕಚೇರಿಯ ಮುಂದೆ ಸೆಪ್ಟೆಂಬರ್ 21ರಿಂದ ‘ಅನಿರ್ದಿಷ್ಟ ಆಹೋರಾತ್ರಿ ಧರಣಿ’ ಹಮ್ಮಿಕೊಳ್ಳಲಾಗಿತ್ತು. ಆ ವೇಳೆ ಜಿಪಂ ಸಿಇಒ ನೇತೃತ್ವದಲ್ಲಿ ಸಂಬಂಧಿಸಿದ ಇಲಾಖಾ ಅಧಿಕಾರಿಗಳನ್ನೊಳಗೊಂಡ ನಡೆದ ಸಭೆಯಲ್ಲಿ ಸೆಪ್ಟೆಂಬರ್ 30ರ ಒಳಗಾಗಿ ಬಾಕಿ ಇರುವ ಅಷ್ಟು ತಿಂಗಳ ವೇತನ ಕಾರ್ಮಿಕರ ಬ್ಯಾಂಕ್ ಖಾತೆಗಳಿಗೆ ಜಮಾ ಮಾಡುವುದಾಗಿ ಹೇಳಿದ್ದರು. ಆದರೆ, ಒಂದೇ ತಿಂಗಳ ವೇತನ ಜಮಾ ಮಾಡಿರುವುದು ಸರಿಯಲ್ಲ. ಉಳಿದ ಎಲ್ಲ ತಿಂಗಳ ವೇತನ ಜಮಾ ಮಾಡಬೇಕು ಎಂದು ಒತ್ತಾಯಿಸಿದರು.
ಸಂಘದ ಜಿಲ್ಲಾ ಮುಖಂಡ ರಾಮಲಿಂಗಪ್ಪ ಬಿ.ಎನ್, ತಾಲ್ಲೂಕು ಅಧ್ಯಕ್ಷ ಶರಣಪ್ಪ ತೆಳಿಗೇರಿ, ಶ್ರೀಕಾಂತ, ಸುರೇಶ್, ಸಿದ್ದಪ್ಪ, ಭೀಮಾಶಂಕರ, ಜಗದೇವಿ, ಸರಿತಾ, ಶ್ರೀದೇವಿ, ಲಕ್ಷ್ಮಿ, ಮಮಾದೇವಿ, ಪುಷ್ಪಲತಾ, ಶಬಿರಮ್ಮ, ಅನುಸೂಯ ಇದ್ದರು.