ಸುರಪುರ:ನಗರದ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ಸಮರ್ಪಕವಾಗಿ ಗ್ರಾಹಕರ ಸೇವೆ ನೀಡುತ್ತಿಲ್ಲ ಎಂದು ಆರೋಪಿಸಿ ಶೋಷಿತ ಪರ ಹೋರಾಟದ ಸಂಘಟನೆಗಳ ಒಕ್ಕೂಟದ ಮುಖಂಡರು ಶನಿವಾರ ಬ್ಯಾಂಕ್ ಎದುರು ಪ್ರತಿಭಟನೆ ನಡೆಸಿದರು.
ಒಕ್ಕೂಟದ ರಾಜ್ಯ ಘಟಕದ ಅಧ್ಯಕ್ಷ ವೆಂಕೋಬ ದೊರೆ ಮಾತನಾಡಿ, ‘ಬ್ಯಾಂಕ್ನಲ್ಲಿ ಸದಾ ಗದ್ದಲವಿರುತ್ತದೆ. ಖಾತೆಗೆ ಹಣ ಜಮೆ ಮಾಡಲು, ಹಣ ವಾಪಾಸ್ ಪಡೆಯಲು ಗಂಟೆ ಗಟ್ಟಲೆ ಕಾಯಬೇಕು’ ಎಂದು ದೂರಿದರು.
ಜಿಲ್ಲಾ ಘಟಕದ ಅಧ್ಯಕ್ಷ ಉಸ್ತಾದ್ ವಜಾಹತ್ ಹುಸೇನ್ ಮಾತನಾಡಿ, ‘ಬ್ಯಾಂಕಿನಲ್ಲಿ ಗ್ರಾಹಕರಿಗೆ ಸಮರ್ಪಕ ಸೇವೆ ಸಿಗುತ್ತಿಲ್ಲ. ಉಳ್ಳವರಿಗೆ ಕರೆದು ಕೂಡಿಸಿ ಸೇವೆ ನೀಡುತ್ತಾರೆ. ಸಾಮಾನ್ಯ ಗ್ರಾಹಕರ ಪಾಡು ದೇವರೇ ಬಲ್ಲ’ ಎಂದು ಆರೋಪಿಸಿದರು.
‘ಶೀಘ್ರದಲ್ಲಿ ಹಿರಿಯ ಅಧಿಕಾರಿಗಳು ಬ್ಯಾಂಕಿಗೆ ಭೇಟಿ ನೀಡಿ ಈ ಅವ್ಯವಸ್ಥೆ ಸರಿಪಡಿಸಬೇಕು. ಇಲ್ಲದಿದ್ದರೆ ಜನವರಿ 10 ರಂದು ಬ್ಯಾಂಕ್ ಎದುರು ಉಪವಾಸ ಸತ್ಯಾಗ್ರಹ ಹಮ್ಮಿಕೊಳ್ಳಲಾಗುತ್ತದೆ’ ಎಂದು ಎಚ್ಚರಿಸಿದರು.
ಬ್ಯಾಂಕ್ ವ್ಯವಸ್ಥಾಪಕ ವಿನಾಯಕ ಅವರಿಗೆ ಮನವಿ ಸಲ್ಲಿಸಲಾಯಿತು.
ಮುಖಂಡರಾದ ಗೋಪಾಲ ಬಾಗಲಕೋಟ, ಶರಣಬಸಪ್ಪ ಪೊಲೀಸಪಾಟೀಲ, ಮಾನಪ್ಪ ದೊರೆ ಮತ್ತು ಗ್ರಾಹಕರು ಭಾಗವಹಿಸಿದ್ದರು.