ಹುಣಸಗಿ: ಪಶ್ಚಿಮ ಬಂಗಾಳದಲ್ಲಿ ಪರಿಶಿಷ್ಟ ಸಮುದಾಯದವರ ವಿರುದ್ಧ ಅವಹೇಳನಕಾರಿ ಹೇಳಿಕೆ ನೀಡಿರುವ ತೃಣಮೂಲ ಕಾಂಗ್ರೆಸ್ ಹಾಗೂ ಆ ಪಕ್ಷದ ನಾಯಕಿ ಸುಜಾತಾ ಮೊಂಡಲ್ ಖಾನ್ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವಂತೆ ಒತ್ತಾಯಿಸಿ ಹುಣಸಗಿ ಪಟ್ಟಣದಲ್ಲಿ ಬಿಜೆಪಿ ವತಿಯಿಂದ ಪ್ರತಿಭಟಿಸಿ ಮನವಿ ಸಲ್ಲಿಸಲಾಯಿತು.
ಬಿಜೆಪಿ ಮಂಡಲ (ಸುರಪುರ ಮತ್ತು ಹುಣಸಗಿ) ಅಧ್ಯಕ್ಷ ಮೇಲಪ್ಪ ಗುಳಗಿ ಮಾತನಾಡಿ, ‘ತೃಣಮೂಲ ಕಾಂಗ್ರೆಸ್ ಪಕ್ಷದ ನಾಯಕಿ ಸುಜಾತಾ ಮೊಂಡಾಲ್ ಖಾನ್ ಅವರು ಪರಿಶಿಷ್ಟ ಸಮುದಾಯದವರನ್ನು ಭಿಕ್ಷುಕರು ಎಂದು ಹೇಳಿದ್ದು, ಸಮಸ್ತ ಸಮುದಾಯದವರನ್ನು ಅವಮಾನಿಸಿದ್ದಾರೆ. ಇದು ಪ್ರಜಾಪ್ರಭುತ್ವ ವಿರೋಧಿ ಹೇಳಿಕೆಯಾಗಿದ್ದು, ಖಂಡನೀಯ’ ಎಂದು ಹೇಳಿದರು.
ಜಿಲ್ಲಾ ಪಂಚಾಯಿತಿ ಸದಸ್ಯ ಹಾಗೂ ಶರಣಪ್ಪ ಗುಳಬಾಳ ಮಾತನಾಡಿ, ಪಶ್ಚಿಮ ಬಂಗಾಳದಲ್ಲಿನ ತೃಣಮೂಲ ಕಾಂಗ್ರೆಸ್ ಪಕ್ಷದ ಮುಖಂಡರ ಈ ಹೇಳಿಕೆ ಸಮಾಜದಲ್ಲಿ ಪರಸ್ಪರ ಸಾಮರಸ್ಯ ಹಾಳು ಮಾಡುತ್ತಿರುವುದಲ್ಲದೆ ದ್ವೇಷ ಉಂಟು ಮಾಡುವಂತಾಗಿದೆ. ಇದರಿಂದಾಗಿ ಸಮುದಾಯದ ಜನರಿಗೆ ತೀವ್ರ ನೋವಾಗಿದೆ ಎಂದರು.
ಮನವಿಪತ್ರವನ್ನು ತಹಶೀಲ್ದಾರ್ ಮಹಾದೇವಪ್ಪಗೌಡ ಬಿರಾದಾರ ಅವರಿಗೆ ಸಲ್ಲಿಸಲಾಯಿತು.
ಈ ಸಂದರ್ಭದಲ್ಲಿ ಎಪಿಎಂಸಿ ಅಧ್ಯಕ್ಷ ದೇವಣ್ಣ ಮಲಗಲದಿನ್ನಿ, ವೀರೇಶ ಚಿಂಚೋಳಿ, ಶಿವನಗೌಡ ಎಸ್.ಪಾಟೀಲ್, ರಾಜಶೇಖರ ದೇಸಾಯಿ, ಮಹೇಶ ಸ್ಥಾವರಮಠ, ನಂದಪ್ಪ ಪೀರಾಪುರ, ಚಂದ್ರಶೇಖರ ಗೋನಾಲ್, ವಿಠ್ಠಲ ಪವಾರ್, ಆನಂದ ಬಾರಿಗಿಡದ್ ಇದ್ದರು.