ಸುರಪುರ: ದಾಖಲೆಗಳನ್ನು ಇರಿಸುವನಗರ ಸಭೆಯ ಕೋಣೆ ಸಂಪೂರ್ಣವಾಗಿ ಶಿಥಿಲವಾವಾಗಿದ್ದು, ದಾಖಲಾತಿಗಳನ್ನು ಉಳಿಸಿಕೊಳ್ಳಲು ಕೂಡಲೇ ಉತ್ತಮ ಕೋಣೆಗೆ ಸ್ಥಳಾಂತರಿಸಬೇಕು ಎಂದು ಆಗ್ರಹಿಸಿ ಜೆಡಿಎಸ್ ಮುಖಂಡರು ಮಂಗಳವಾರ ನಗರಸಭೆ ಮುಂದೆ ಪ್ರತಿಭಟನೆ ನಡೆಸಿದರು.
ರಾಜ್ಯ ಘಟಕದ ಸಂಘಟನಾ ಕಾರ್ಯದರ್ಶಿ ಉಸ್ತಾದ್ ವಜಾಹತ್ ಹುಸೇನ್ ಮಾತನಾಡಿ, ‘ದಾಖಲೆಗಳ ಸಂಗ್ರಹ ಕೋಣೆಯಲ್ಲಿ ಜನರ ಆಸ್ತಿಯ ಪತ್ರಗಳಿವೆ. ಕೋಣೆಯ ಶಿಥಿಲದಿಂದ ಅವು ಹಾಳಾಗುವ ಸಾಧ್ಯತೆ ಇದ್ದು, ನಗರಸಭೆಯು ನಿರ್ಲಕ್ಷ್ಯ ವಹಿಸಿದೆ’ ಎಂದು ದೂರಿದರು.
ಖುರೇಶಿ ಮೋಹಲ್ಲಾದ ನೀರಿನ ಟ್ಯಾಂಕ್ 30 ವರ್ಷಗಳ ಹಿಂದೆ ನಿರ್ಮಿಸಲಾಗಿದೆ. ಸಂಪೂರ್ಣ ಶಿಥಿಲಗೊಂಡು ಸೋರುತ್ತಿದ್ದು, ಬೀಳುವ ಹಂತದಲ್ಲಿದೆ. ಸುತ್ತಲೂ ಮನೆಗಳಿಗೆ ಅಪಾಯಕಾರಿಯಾಗಿದೆ. ಇದುವರೆಗೂ ಟ್ಯಾಂಕ್ ಸ್ವಚ್ಛಗೊಳಿಸಿಲ್ಲ. ತಕ್ಷಣ ಟ್ಯಾಂಕ್ ನೆಲಸಮಗೊಳಿಸಿ ಹೊಸದಾಗಿ ನಿರ್ಮಿಸಬೇಕು’ ಎಂದು ಆಗ್ರಹಿಸಿದರು.
ಸಂತ್ರಾಸವಾಡಿಯ ಖಬರಸ್ತಾನದಲ್ಲಿ ವಿದ್ಯುತ್ ವ್ಯವಸ್ಥೆ ಇಲ್ಲ. ರಾತ್ರಿ ವೇಳೆ ಶವ ಸಂಸ್ಕಾರಕ್ಕೆ ತೊಂದರೆಯಾಗಿದೆ. ಕೂಡಲೇ ವಿದ್ಯುತ್ ದೀಪ ಅಳವಡಿಸಬೇಕು ಎಂದರು.
ತಾಲ್ಲೂಕು ಘಟಕದ ಅಧ್ಯಕ್ಷ ಸಂಗಣ್ಣ ಬಾಕ್ಲಿ ಮಾತನಾಡಿ, ‘ವಾರಾಂತ್ಯ ಕರ್ಫ್ಯೂನಿಂದ ಬೀದಿ ಬದಿ ವ್ಯಾಪಾರಿಗಳು, ಬಡವರಿಗೆ ತೊಂದರೆಯಾಗಿದೆ. ತಕ್ಷಣ ಅವರಿಗೆ ಪರಿಹಾರ ಘೋಷಿಸಬೇಕು’ ಎಂದು ಆಗ್ರಹಿಸಿದರು.
ವೆಂಕೋಬ ದೊರಿ, ಶೌಕತ್ ಅಲಿ ಖುರೇಶಿ, ತಿಪ್ಪಣ್ಣ ಪೊಲೀಸ್ ಪಾಟೀಲ, ಶಾಂತು ತಳವಾರಗೇರಿ, ಮಹಿಬೂಬ್ ಚೌಧರಿ, ಅಲ್ತಾಫ್ ಸಗರಿ, ಮಹಮ್ಮದ್ ಮಹೆಬೂಬ್ ಇದ್ದರು.