ಯಾದಗಿರಿ: ನಗರದಲ್ಲಿ ಸುಮಾರು 42–43 ಡಿಗ್ರಿ ಸೆಲ್ಸಿಯಸ್ ಅಧಿಕ ತಾಪಮಾನ ಹೆಚ್ಚಳದಿಂದ ಜನರು ತತ್ತರಿಸಿದ್ದಾರೆ. ಈ ನಡುವೆ ಪ್ರಧಾನ ಮಂತ್ರಿ ಉದ್ಯೋಗ ಕೌಶಲ ಕೇಂದ್ರದ ಮುಂಭಾಗ ಹಾಗೂ ಮಧ್ಯಾಹ್ನದ ವೇಳೆಯಲ್ಲಿ ಜಿಲ್ಲಾ ಸರ್ಕಾರಿ ಆಸ್ಪತ್ರೆ ಬಳಿ ಮಜ್ಜಿಗೆ ವಿತರಿಸಲಾಗುತ್ತಿದೆ.
ನಗರದ ಕೋರ್ಟ್, ತಹಶೀಲ್ದಾರ್ ಕಚೇರಿ ಇನ್ನಿತರ ಸರ್ಕಾರಿ ಕಚೇರಿಗಳಿಗೆ ನಿತ್ಯ ಜನರು ವಿವಿಧ ಕೆಲಸ ಕಾರ್ಯಕ್ಕಾಗಿ ಬರುತ್ತಾರೆ. ಹಣಕಾಸಿನ ಸ್ಥಿತಿವಂತರು ಅಂಗಡಿಗಳಲ್ಲಿ ಹಣ ಕೊಟ್ಟು ನೀರು ಖರೀದಿಸಿ ಕುಡಿಯುತ್ತಾರೆ. ಆದರೆ, ಬಡವರು ಹಣ ನೀಡಿ ನೀರು ಕುಡಿಯುವುದು ಕಡಿಮೆ. ಹೀಗಾಗಿಯೇ ಶುದ್ಧ ಕುಡಿವ ನೀರು, ಮಜ್ಜಿಗೆ ವಿತರಿಸಲು ಪ್ರೇರಣೆಯಾಗಿದೆ ಎಂದು ಉದ್ಯಮಿ ತಿಳಿಸಿದರು.
‘ಮೇ 4ರಿಂದ ಮಜ್ಜಿಗೆ, ಕುಡಿವ ನೀರು ವಿತರಿಸಲಾಗುತ್ತಿದೆ. ಮಧ್ಯಾಹ್ನ 1 ಗಂಟೆಯಿಂದ 2 ಗಂಟೆಯವರೆಗೆ ಉಚಿತವಾಗಿ ಮಜ್ಜಿಗೆ ಪೂರೈಸಲಾಗುತ್ತಿದೆ. ನೀರು ಬೆಳಗ್ಗೆಯಿಂದ ಸಂಜೆವರೆಗೆ ವಿತರಿಸಲಾಗುವುದು’ ಎಂದು ಇಲ್ಲಿನ ಉಸ್ತುವಾರಿ ನೋಡಿಕೊಳ್ಳುತ್ತಿರುವ ಬಸವರಾಜು ಹೊಸಳ್ಳಿ ಹೇಳಿದರು.