ಯಾದಗಿರಿ: ಜಿಲ್ಲೆಯ ವಿವಿಧೆಡೆ ವಲಸೆ ಕಾರ್ಮಿಕರನ್ನು ಸಾಂಸ್ಥಿಕ ಕ್ವಾರಂಟೈನ್ ಮಾಡಲಾಗಿದ್ದು, ಅವಧಿ ಮುಗಿದರೂ ವರದಿ ಬಂದಿಲ್ಲದ ಕಾರಣ ಅಧಿಕಾರಿಗಳು ಮನೆಗೆ ಕಳುಹಿಸುತ್ತಿಲ್ಲ. ಸ್ವಾಬ್ ಸಂಗ್ರಹಿಸದ ಅಧಿಕಾರಿಗಳ ವಿರುದ್ಧ ಕ್ವಾರಂಟೈನ್ನಲ್ಲಿರುವ ಕಾರ್ಮಿಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ತಾಲ್ಲೂಕಿನ ಶೆಟ್ಟಿಗೇರಾ ಗ್ರಾಮದಲ್ಲಿ ಬುಧವಾರ ಕ್ವಾರಂಟೈನ್ನಲ್ಲಿದ್ದ ವಲಸಿಗರು ತಮ್ಮನ್ನು ತಮ್ಮ ಊರುಗಳಿಗೆ ಕಳಿಸಿಕೊಡಿ ಎಂದು ಪಟ್ಟು ಹಿಡಿದು ಗೇಟಿನ ಬೀಗ ಮುರಿದು ಹಾಕಿದ್ದಾರೆ. ನಂತರ ಅಲ್ಲಿಯೇ ಇದ್ದ ಪೊಲೀಸ್ ಕಾನ್ಸ್ಟೆಬಲ್ ಅವರನ್ನು ತಡೆದಿದ್ದಾರೆ.
‘ಕ್ವಾರಂಟೈನ್ ಮಾಡಿ 18 ದಿನಗಳು ಆಯಿತು. ಶನಿವಾರ ಟೆಸ್ಟಿಂಗ್ ಮಾಡಲಿಕ್ಕೆ ಗಂಟಲು ದ್ರವ ತೆಗೆದುಕೊಂಡು ಹೋಗಿದ್ದಾರೆ. ಇದುವರೆಗೆ ಫಲಿತಾಂಶ ಬಂದಿಲ್ಲ. ಇಲ್ಲಿ ಸರಿಯಾದ ಊಟ ಇಲ್ಲ. ಉಪ್ಪಿಟ್ಟು, ಅನ್ನ ಬಿಟ್ಟರೆ ರೊಟ್ಟಿ, ಚಪಾತಿ ಕೊಡುತ್ತಿಲ್ಲ. ಅದು ಇಂತಿಷ್ಟೆ ಕೊಡುತ್ತಿದ್ದಾರೆ. ಸಮೀಪ ಇರುವ ಊರಿನವರು ತಮ್ಮ ಸಂಬಂಧಿಕರಿಗೆ ಬುತ್ತಿ ತಂದು ಕೊಡುತ್ತಾರೆ. ನಮ್ಮದು ಕೊಡೇಕಲ್, ಜೇವರ್ಗಿ, ಸುರಪುರ ತಾಲ್ಲೂಕು ಇದೆ. ಅಲ್ಲಿಂದ ಬುತ್ತಿ ತರೋಕೆ ಆಗಲ್ಲ. ಅಲ್ಲದೆ ಚಿಕ್ಕ ಮಕ್ಕಳಿಗೆ ಹಾಲಿನ ವ್ಯವಸ್ಥೆ ಕೂಡ ಮಾಡಿಲ್ಲ. ಒಂದು ಬಾರಿ ಸಾಬೂನು ಕೊಟ್ಟು ಹೋದವರು ಮತ್ತೆ ಏನು ಕೊಟ್ಟಿಲ್ಲ’ ಎಂದು ದೂರಿದ್ದಾರೆ.
ಗುರುಮಠಕಲ್, ಗುಂಜನೂರ್, ಮಲ್ಹಾರ್ ಮತ್ತು ಅಲ್ಲಿಪುರ ಆದರ್ಶ ಶಾಲೆಯ ಕ್ವಾರಂಟೈನ್ನಲ್ಲಿ ಅವಧಿ ಮೂಗಿದರೂ ಇನ್ನೂ ಪರೀಕ್ಷೆಗೆ ಒಳಪಡಿಸಿಲ್ಲ ಎಂದು ಅವಲತ್ತುಕೊಂಡಿದ್ದಾರೆ.
ಸಂಪರ್ಕಕ್ಕೆ ಸಿಗದ ಅಧಿಕಾರಿಗಳು:ತಮ್ಮ ಸಮಸ್ಯೆ ಹೇಳಿಕೊಳ್ಳಲು ಗ್ರಾಮದ ಪಿಡಿಒ, ಕಂದಾಯ ನೀರಿಕ್ಷಕ, ತಹಶೀಲ್ದಾರ್ ಅವರಿಗೆ ಕರೆ ಮಾಡಿದರೆ ಸ್ವೀಕರಿಸುವುದಿಲ್ಲ. ಜೊತೆಗೆ ವೈದ್ಯರು, ದಾದಿಯರು ಬರುವುದಿಲ್ಲ. ಇದರಿಂದ ಆರೋಗ್ಯ ಸಮಸ್ಯೆ ಆದರೂ ನಮಗೆ ಏನು ಮಾಡಬೇಕು ಎನ್ನುವುದು ತಿಳಿಯುತ್ತಿಲ್ಲ ಎಂದು ತಾಲ್ಲೂಕಿನ ಕಾಳ ಬೆಳೆಗುಂದಿ ಗ್ರಾಮದ ಶಾಲೆಯಲ್ಲಿರುವ ಕಾರ್ಮಿಕರು ‘ಪ್ರಜಾವಾಣಿ’ ಜೊತೆ ನೋವು ತೋಡಿಕೊಂಡರು.
ಊಟ, ನೀರಿಗಾಗಿ ಪರದಾಟ:ಕ್ವಾರಂಟೈನ್ ಕೇಂದ್ರಗಳಿಗೆ ಸರಿಯಾದ ಸಮಯಕ್ಕೆ ಊಟ ಬರುವುದಿಲ್ಲ. ಸಂಜೆ 4 ಗಂಟೆಗೆ ಬರುತ್ತದೆ. ಒಂದು ದಿನ ರಾತ್ರಿ 10:45 ಕ್ಕೆ ಬಂದಿದೆ. ಇಲ್ಲಿ ಚಿಕ್ಕ ಮಕ್ಕಳು ಇದ್ದಾರೆ. ಅವರಿಗೆ ಹಸಿವಾದರೆ ಹಾಲು ಕುಡಿಸಲು ಆಗುತ್ತಿಲ್ಲ ಎಂದು ಅಲ್ಲಿನವರು ಸಮಸ್ಯೆ ಹೇಳಿಕೊಂಡರು.
ಅವಾಚ್ಯ ಶಬ್ದಗಳಿಂದ ಪೊಲೀಸರ ನಿಂದನೆ:ತಮ್ಮ ಸಮಸ್ಯೆಗಳ ಕುರಿತು ಅಧಿಕಾರಿಗಳಿಗೆ ಮನವರಿಕೆ ಮಾಡಲು ವಿಡಿಯೋ ಮಾಡಿದರೆ, ಅಲ್ಲಿರುವ ಪೊಲೀಸರು ಅವಾಚ್ಯ ಶಬ್ದಗಳಿಂದ ನಿಂದಿಸುತ್ತಾರೆ. ಇದರಿಂದ ತಮ್ಮ ಸಮಸ್ಯೆಯನ್ನು ಯಾರ ಗಮನಕ್ಕೆ ತರಬೇಕು ಎಂದು ಹೇಸರಳೆಲು ಇಚ್ಛೈಸದ ಕಾರ್ಮಿಕರು ನೋವಿನಿಂದ ನುಡಿದರು.
ಈ ಎಲ್ಲ ವಿಷಯಗಳನ್ನು ವಿಚಾರಿಸಲು ಜಿಲ್ಲಾ ಕುಟುಂಬ ಕಲ್ಯಾಣ ಅಧಿಕಾರಿ ಡಾ.ಎಂ.ಎಸ್.ಪಾಟೀಲ ಅವರಿಗೆ ಕರೆ ಮಾಡಿದರೂ ಸ್ವೀಕರಿಸಲಿಲ್ಲ.
***
ಜಿಲ್ಲೆಯಲ್ಲಿ ಕೊರೊನಾ ಸೋಂಕಿತರ ಸಂಖ್ಯೆಯು ದಿನದಿಂದ ದಿನಕ್ಕೆ ಉಲ್ಬಣಗೊಳ್ಳುತ್ತಿರುವ ಕಾರಣ ಶಂಕಿತರನ್ನು ಕ್ಟಾರಂಟೈನ್ ಮಾಡಬೇಕಾಗಿರುವುದು ಅತ್ಯವಶ್ಯಕ.
-ಎಂ.ಕೂರ್ಮಾರಾವ್, ಜಿಲ್ಲಾಧಿಕಾರಿ
***
ಕ್ವಾರಂಟೈನ್ನಲ್ಲಿರುವ ವಲಸೆ ಕಾರ್ಮಿಕರಿಗೆ ಸೂಕ್ತ ಸೌಲಭ್ಯಗಳನ್ನು ಕಲ್ಪಿಸಬೇಕು. ಗಂಟಲಿನ ದ್ರವ ಮಾದರಿಯನ್ನು ಶೀಘ್ರ ಸಂಗ್ರಹಿಸಿ ಕಳಿಸಿಕೊಡುವ ವ್ಯವಸ್ಥೆ ಮಾಡಬೇಕು.
-ನಾಗೇಶ ಗದ್ದಿಗೆ,ಗುರುಮಠಕಲ್ ತಾಲ್ಲೂಕುಅಧ್ಯಕ್ಷ, ಜಯ ಕರ್ನಾಟಕ ಸಂಘಟನೆ
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.