ಯಾದಗಿರಿ : ರಾಜ್ಯ ಕಾನೂನು ಸೇವೆಗಳ ಪ್ರಾಧಿಕಾರದ ವತಿಯಿಂದ ರಾಜ್ಯದ ಎಲ್ಲಾ ನ್ಯಾಯಾಲಯದ ಆವರಣಗಳಲ್ಲಿ ಜುಲೈ 8ರಂದು ರಾಷ್ಟ್ರೀಯ ಲೋಕ ಅದಾಲತ್ಗಳನ್ನು ಆಯೋಜಿಸಲಾಗುತ್ತಿದ್ದು, ಸಾರ್ವಜನಿಕರು ತಮ್ಮ ವ್ಯಾಜ್ಯ ಪೂರ್ವ ಹಾಗೂ ನ್ಯಾಯಾಲಯಗಳಲ್ಲಿ ಬಾಕಿ ಇರುವ ಪ್ರಕರಣಗಳಿಗೆ ರಾಜಿ ಸಂಧಾನದ ಮೂಲಕ ಶೀಘ್ರ ಪರಿಹಾರ ಕಂಡುಕೊಳ್ಳುವಂತೆ ಪ್ರಧಾನ ಜಿಲ್ಲಾ ಹಾಗೂ ಸೆಷನ್ಸ್ ನ್ಯಾಯಾಧೀಶ ಜಿ.ನಂಜುಂಡಯ್ಯ ತಿಳಿಸಿದ್ದಾರೆ.
ರಾಜಿ ಸಂಧಾನದ ಮೂಲಕ ರಾಜಿಯಾಗುವಂತಹ ಎಲ್ಲಾ ರೀತಿಯ ಪ್ರಕರಣಗಳನ್ನು ಹಾಗೂ ವ್ಯಾಜ್ಯಗಳನ್ನು ರಾಜಿಸಂಧಾನದ ಮೂಲಕ ಇತ್ಯರ್ಥ ಪಡಿಸಲಾಗುತ್ತಿದ್ದು, ಕಕ್ಷಿದಾರರು ಹಾಗೂ ಸಾರ್ವಜನಿಕರು ಇದರ ಸದುಪಯೋಗ ಪಡೆಯಬೇಕೆಂದು ಶುಕ್ರವಾರ ನಡೆದ ಸುದ್ದಿಗೋಷ್ಠಿಯಲ್ಲಿ ಹೇಳಿದರು.
ಇಲ್ಲಿಯವರೆಗೆ ಕ್ರಿಮಿನಲ್, ಸಿವಿಲ್, ಕೌಟಂಬಿಕ, ಎನ್ಐ ಆ್ಯಕ್ಟ್ ಅಡಿ ಸೆಕ್ಷನ್ 138 ರಲ್ಲಿನ ಪ್ರಕರಣಗಳು, ಬ್ಯಾಂಕ್ ಸಂಬಂಧಿತ ಪ್ರಕರಣಗಳು, ವೈವಾಹಿಕ ಕಲಹದ ಪ್ರಕರಣಗಳು, ಭೂ ಸ್ವಾಧೀನ ಪ್ರಕರಣಗಳು ಸೇರಿದಂತೆ ವಿವಿಧ ರೀತಿಯ ಸುಮಾರು 17,942 ಪ್ರಕರಣಗಳು ಇಲ್ಲಿಯವರೆಗಿನ ಬಾಕಿ ಉಳಿದ ಪ್ರಕರಣಗಳಾಗಿವೆ ಎಂದು ಮಾಹಿತಿ ನೀಡಿದರು.
ಜಿಲ್ಲೆಯಲ್ಲಿ 1,310 ಪ್ರಕರಣಗಳನ್ನು ಇವರೆಗೆ ಇತ್ಯರ್ಥಪಡಿಸಲು ಗುರುತಿಸಲಾಗಿದೆ. ಜಿಲ್ಲೆಯಲ್ಲಿ ಈ ರಾಷ್ಟ್ರೀಯ ಲೋಕ ಅದಾಲತ್ ಅಂಗವಾಗಿ 150 (ಪಿಎಲ್ಸಿ ಪ್ರಕರಣಗಳು), ಸಾರ್ವಜನಿಕ ಹಿತಾಸಕ್ತಿ ಅರ್ಜಿಗಳು ನೊಂದಣಿಯಾಗಿದ್ದು, ಕಳೆದ ಎರಡು ರಾಷ್ಟ್ರೀಯ ಲೋಕ ಅದಾಲತ್ಗಳಲ್ಲಿ ಕ್ರಮವಾಗಿ 7,194 ಹಾಗೂ 5,169 ಪ್ರಕರಣಗಳನ್ನು ರಾಜಿ ಸಂಧಾನದ ಮೂಲಕ ಇತ್ಯರ್ಥಪಡಿಸಲಾಗಿದೆ ಎಂದು ಹೇಳಿದರು.
ರಾಷ್ಟ್ರೀಯ, ರಾಜ್ಯ, ಜಿಲ್ಲಾ ಹಾಗೂ ತಾಲ್ಲೂಕು ಕಾನೂನು ಸೇವೆಗಳ ಪ್ರಾಧಿಕಾರಗಳಿಂದ ಲೋಕ ಅದಾಲತ್ ಆಯೋಜಿಸಲಾಗಿದೆ. ಇದರಲ್ಲಿ ಕ್ರಿಮಿನಲ್ ಪ್ರಕರಣಗಳು (ಅಪರಾಧಿಕ ಪ್ರಕರಣಗಳು), ಸಿವಿಲ್ ಪ್ರಕರಣಗಳು, ಮೋಟಾರ್ ಕಾಯ್ದೆ ಪರಿಹಾರ ಪ್ರಕರಣಗಳು, ಕುಟುಂಬಿಕ ವ್ಯಾಜ್ಯ, ಹಣಕಾಸಿನ ವ್ಯಾಜ್ಯಗಳು, ಸೇರಿದಂತೆ ವಿವಿಧ ಪ್ರಕರಣಗಳನ್ನು ಕಕ್ಷಿದಾರರು-ವಕೀಲರ ಒಪ್ಪಿಗೆ ಮೇರೆಗೆ ರಾಜಿ ಸಂಧಾನದ ಮೂಲಕ ಪ್ರಕರಣಗಳನ್ನು ಶೀಘ್ರ ಇತ್ಯರ್ಥ ಪಡಿಸಲಾಗುತ್ತದೆ. ಇಲ್ಲಿ ಇತ್ಯರ್ಥ ಪಡಿಸಲಾಗುವ ಪ್ರಕರಣಗಳನ್ನು ಸಂಪೂರ್ಣವಾಗಿ ಇತ್ಯರ್ಥಗೊಂಡು ಉಭಯ ವ್ಯಕ್ತಿಗಳಿಗೆ ನ್ಯಾಯ ದೊರೆಯಲಿದ್ದು, ಮೆಲ್ಮನವಿಗೆ ಅವಕಾಶವಿರುವದಿಲ್ಲ ತಿಳಿಸಿದರು.
ಈ ಕುರಿತಂತೆ ಹೆಚ್ಚಿನ ಮಾಹಿತಿಗಾಗಿ ರಾಜ್ಯ ಕಾನೂನು ಸೇವೆಗಳ ಪ್ರಾಧಿಕಾರ ಟೋಲ್ ಫ್ರೀ ಸಂಖ್ಯೆ 180042590900 ಹಾಗೂ ಜಿಲ್ಲೆಯ ಕಾನೂನು ಸೇವಾ ಪ್ರಾಧಿಕಾರ ಸದಸ್ಯ ಕಾರ್ಯದರ್ಶಿ 08473-253243ಗೆ ಸಂಪರ್ಕಿಸಬಹುದೆಂದು ತಿಳಿಸಿದರು.
ಈ ವೇಳೆ ಹಿರಿಯ ಸಿವಿಲ್ ನ್ಯಾಯಾಧೀಶ ಕಾರ್ಯದರ್ಶಿ ರವೀಂದ್ರ ಹೊನೋಲೆ ಇದ್ದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.