ಶಹಾಪುರ: ‘ಧರ್ಮ ಜಾಗೃತಿ ಮಾಡಲು ಪಾದಯಾತ್ರೆ, ಇಷ್ಟಾರ್ಥಸಿದ್ದಿಗಾಗಿ ಇಷ್ಟಲಿಂಗ ಪೂಜೆ ಅದರಂತೆ ಎಲ್ಲೆಡೆ ಶ್ರೀಶೈಲ ಪೀಠದ ಭಕ್ತಾಧಿಗಳಿದ್ದು ಅವರ ಆಶೋತ್ತರಗಳು ಈಡೇರಲು ಮತ್ತು ಮುಂದಿನ ಪೀಳಿಗೆಗೆ ಪೀಠದಲ್ಲಿ ಸುಸಜ್ಜಿತ ವ್ಯವಸ್ಥೆ ಕೈಗೊಳ್ಳಲು ಭಕ್ತರ ಆಶಯದಂತೆ ಬೃಹತ್ ಕಾರ್ಯಕ್ರಮ ಆಯೋಜಿಸಲಾಗಿದೆ. ಪೀಠಾರೋಣ, ಜನ್ಮಸುವರ್ಣ ಮಹೋತ್ಸವ ಸೇವೆಯಿಂದ ಸಂಗ್ರಹಗೊಂಡ ಎಲ್ಲವನ್ನೂ ಪೀಠದ ಅಭಿವೃದ್ಧಿಗಾಗಿ ವ್ಯಯಮಾಡಲಾಗುವುದು. ತನು ಮನ ಧನ ಸೇವೆಯೊಂದಿಗೆ ಧಾರ್ಮಿಕ ಕಾರ್ಯಕ್ರಮಗಳಲ್ಲಿ ಭಾಗವಹಿಸಬೇಕು’ ಎಂದು ಶ್ರೀಶೈಲ ಪೀಠದ ಚನ್ನಸಿದ್ದರಾಮ ಪಂಡಿತಾರಾಧ್ಯ ಶಿವಾಚಾರ್ಯರು ನುಡಿದರು.
ನಗರದ ಶ್ರೀ ಚರಬಸವೇಶ್ವರ ಗದ್ದುಗೆಯಲ್ಲಿ ಶನಿವಾರ ಶ್ರೀಶೈಲದ ಚನ್ನಸಿದ್ದರಾಮ ಪಂಡಿತಾರಾಧ್ಯ ಶಿವಾಚಾರ್ಯರ ದ್ವಾದಶ ಪೀಠಾರೋಹಣ ಮತ್ತು ಜನ್ಮ ಸುವರ್ಣ ಮಹೋತ್ಸವ ಅಂಗವಾಗಿ ಹಮ್ಮಿಕೊಂಡ ಪೂರ್ವಭಾವಿ ಸಭೆಯಲ್ಲಿ ಮಾತನಾಡಿದರು.
ಶಾಸಕ ಶರಣಬಸಪ್ಪ ದರ್ಶನಾಪುರ ಮಾತನಾಡಿ, ಶ್ರೀಗಳ ಪೀಠಾರೋಹಣ ಮತ್ತು ಜನ್ಮ ಸುವರ್ಣ ಮಹೋತ್ಸವದ ನಿಮಿತ್ತ ಶ್ರೀಶೈಲ ಪೀಠದಲ್ಲಿ ಭಕ್ತಾಧಿಗಳಿಗಾಗಿ ಅಭಿವೃದ್ಧಿ ಪಡಿಸಲು ಉಪಯೋಗಿಸುತ್ತಿರುವ ಹಲವಾರು ಕಾರ್ಯಕ್ರಮ ಹಾಗೂ ಸೇವೆಯಲ್ಲಿ ಪಾಲ್ಗೊಳ್ಳುವ ಮೂಲಕ ಶ್ರೀಗಳು ವಹಿಸುವ ಯಾವುದೇ ಸೇವೆಯನ್ನು ಪಾಲಿಸಲು ಸಿದ್ಧನಿದ್ದೇನೆ ಎಂದು ತಿಳಿಸಿದರು.
ಜಗದ್ಗುರುಗಳ ದ್ವಾದಶ ಪೀಠಾರೋಹಣ ಮತ್ತು ಜನ್ಮ ಸುವರ್ಣ ಮಹೋತ್ಸವದ ಅಂಗವಾಗಿ ಅಕ್ಟೋಬರ್ 29 ರಿಂದ ಬೆಳಗಾವಿ ಜಿಲ್ಲೆ ಚಿಕ್ಕೋಡಿ ತಾಲ್ಲೂಕಿನ ಯಡೂರುದಿಂದ ಶ್ರೀಶೈಲದವರೆಗೆ ಜಗದ್ಗುರುಗಳೊಂದಿಗೆ ಅಸಂಖ್ಯಾತ ಭಕ್ತಾಧಿಗಳೊಂದಿಗೆ ಸುಮಾರು 565ಕಿ.ಮಿ ಪಾದಯಾತ್ರೆ, ಮಾರ್ಗಮಧ್ಯದಲ್ಲಿ ಬರುವ ಗ್ರಾಮಗಳಲ್ಲಿ ಧರ್ಮಜಾಗೃತಿ, ಲಿಂಗದೀಕ್ಷೆ, ದುಶ್ಚಟಗಳ ಭಿಕ್ಷೆ ಹಾಗೂ ಮಾರ್ಗದ ಮಧ್ಯ ಎರಡೂ ಬದಿಗಳಲ್ಲಿ ಸುಮಾರು 2.50 ಲಕ್ಷ ಸಸಿ ನೆಡುವ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ.
2023 ಜನವರಿ 10ರಿಂದ 14ರ ವರೆಗೆ ಅಖಿಲ ಭಾರತ ವೀರಶೈವ ಮಹಾಸಭೆ ಅಧಿವೇಶನ, ವೇದಾಂತ ಸಮ್ಮೇಳನ, ವಚನ ಸಮ್ಮೇಳನ, ರಾಷ್ಟ್ರೀಯ ವೀರಶೈವಾಗಮ ಸಮಾವೇಶ ಮತ್ತು ತೆಲುಗು, ಕನ್ನಡ ಹಾಗೂ ಮರಾಠಿ ವೀರಶೈವ ಸಾಹಿತ್ಯಗೋಷ್ಠಿ, ಉಚಿತ ಸಾಮೂಹಿಕ ವಿವಾಹ ಸೇರಿದಂತೆ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಆಯೋಜಿಸಲಾಗಿದೆ.
ಭಕ್ತರು ಧಾರ್ಮಿಕ ಸೇವಾ ಅಡಿಯಲ್ಲಿ ತುಲಾಭಾರ ಸೇವೆ, ಅನ್ನದಾನ ಸೇವೆ, ಇಷ್ಟಲಿಂಗ ಮಹಾಪೂಜಾ ಸೇವೆ, ರುದ್ರ ಹೋಮ ಸೇವೆ, ವಿಶೇಷ ದಾಸೋಹ ಸೇವೆ, ಶ್ರೀಪೀಠದಲ್ಲಿ ಯಾತ್ರಿ ನಿವಾಸದಲ್ಲಿ ಒಂದು ಕೋಣೆಯ ಕಟ್ಟಿಸುವ ಸೇವೆಗೆ ಅವಕಾಶ ಕಲ್ಪಿಸಲಾಗಿದ್ದು ಆಸಕ್ತ ಭಕ್ತಾಧಿಗಳು ಸೇವೆಯಲ್ಲಿ ಭಾಗವಹಿಸಬೇಕೆಂದು ನಗರದ ಕುಂಬಾರ ಓಣಿ ಹಿರೇಮಠದ ಸೂಗುರೇಶ್ವರ ಶಿವಾಚಾರ್ಯರು ಮಾಹಿತಿ ನೀಡಿದರು.
ಮಾಗಣಗೇರಿ ಡಾ.ವಿಶ್ವರಾಧ್ಯ ಶಿವಾಚಾರ್ಯರು, ಕನ್ಯೆಕೊಳುರು ಚೆನ್ನವೀರ ಶಿವಾಚಾರ್ಯರು, ನಗರದ ಗುಮಳಾಪುರ ಮಠದ ಸಿದ್ದೇಶ್ವರ ಶಿವಾಚಾರ್ಯರು,ಕೆಂಭಾವಿ ಚನ್ನಬಸವ ಶಿವಾಚಾರ್ಯರು, ಮದ್ರಕಿ ಶಿವಾಚಾರ್ಯರು, ಚಟ್ನಳ್ಳಿ ಶ್ರೀಗಳು, ಗದ್ದುಗೆಯ ಬಸವಯ್ಯ ಶರಣರು ಮಲ್ಲಣ್ಣ ಮಡ್ಡಿ ಸಾಹು, ಶರಣು ಗದ್ದುಗೆ ಇದ್ದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.