ಯಾದಗಿರಿ: ವಡಗೇರಾ-ಯಾದಗಿರಿ ಮುಖ್ಯ ರಸ್ತೆಯ ಮೇಲೆ ಕಾರು ಮತ್ತು ಬೈಕ್ ವಾಹನದ ಮಧ್ಯೆ ಅಪಘಾತ ಸಂಭವಿಸಿ ಒಬ್ಬ ವ್ಯಕ್ತಿ ಸ್ಥಳದಲ್ಲಿಯೇ ಸಾವನ್ನಪ್ಪಿದ್ದು, ತಾಯಿ, ಮಗನಿಗೆ ಗಂಭೀರ ಗಾಯಗಳಾದ ಘಟನೆ ಭಾನುವಾರ ಸಂಜೆ ನಡೆದಿದೆ.
ಚಂದ್ರಶೇಖರ ಮಲ್ಲೇಶಪ್ಪ ಮುದನೂರ (36) ಎನ್ನುವ ವ್ಯಕ್ತಿ ಅಪಘಾತದಲ್ಲಿ ಮೃತಪಟ್ಟಿರುವ ದುರ್ದೈವಿ. ಇನ್ನುಳಿದಂತೆ ಈತನ ಪತ್ನಿ ವನಿತಾ ಚಂದ್ರಶೇಖರ ಮುದನೂರ (31) ಹಾಗೂ ಮಗ ಮಣಿಕಂಠ (7) ಇಬ್ಬರಿಗೆ ಗಂಭೀರ ಗಾಯಗಳಾಗಿದ್ದು, ಚಿಕಿತ್ಸೆ ಪಡೆಯುತ್ತಿದ್ದಾರೆ.
ಘಟನೆಯ ವಿವರ: ಸಂಕ್ರಾಂತಿ ಹಬ್ಬದ ನಿಮಿತ್ತ ವಡಗೇರಾ ಪಟ್ಟಣದಲ್ಲಿರುವ ತನ್ನ ತವರು ಮನೆಗೆ ಪತಿ ಹಾಗೂ ಮಗನ ಜೊತೆ ಬಂದಿದ್ದ ವನಿತಾ 6 ಗಂಟೆಗೆ ಯಾದಗಿರಿಯ ತನ್ನ ಪತಿ ಮನೆಗೆ ಹಿಂದಿರುಗುತ್ತಿರುವ ಸಮಯದಲ್ಲಿ ಹಾಲಗೇರಾ ಗ್ರಾಮದ ಸರ್ಕಾರಿ ಪ್ರೌಢ ಶಾಲೆಯ ಹತ್ತಿರ ಈ ದುರ್ಘಟನೆ ಸಂಭವಿಸಿದೆ. ಯಾದಗಿರಿ ಕಡೆಯಿಂದ ಬರುತ್ತಿದ್ದ ಟೊಯೋಟಾ ಕಾರು ನೇರವಾಗಿ ಬೈಕ್ ವಾಹನಕ್ಕೆ ಡಿಕ್ಕಿ ಹೊಡೆದ ಪರಿಣಾಮ ದ್ವಿಚಕ್ರ ಚಲಾಯಿಸುತ್ತಿದ್ದ ಚಂದ್ರಶೇಖರ ಸ್ಥಳದಲ್ಲಿಯೇ ಸಾವನ್ನಪ್ಪಿದ್ದಾರೆ. ಅಪಘಾತ ಸಂಭವಿಸಿದ ತಕ್ಷಣ ಕಾರು ಚಾಲಕ ಕಾರು ಬಿಟ್ಟು ಓಡಿ ಹೋಗಿದ್ದಾನೆ ಎಂದು ತಿಳಿದು ಬಂದಿದೆ.
ಈ ಕುರಿತು ವಡಗೇರಾ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.