ಯಾದಗಿರಿಯ: ಕಲಿಕೆ ಟಾಟಾ- ಟ್ರಸ್ಟ್ ಮತ್ತು ಕೃಷಿ ವಿಜ್ಞಾನ ಕೇಂದ್ರ ಕವಡಿಮಟ್ಟಿ ವತಿಯಿಂದ ಶೇಂಗಾ ಬೆಳೆಯ ಸುಧಾರಿತ ಬೇಸಾಯ ಕ್ರಮಗಳ ಕುರಿತು ತರಬೇತಿಯನ್ನು ನಗರದ ಕಲಿಕೆ ಟಾಟಾ- ಟ್ರಸ್ಟ್ ಸಂಸ್ಥೆಯಲ್ಲಿ ಈಚೆಗೆ ಹಮ್ಮಿಕೊಳ್ಳಲಾಗಿತ್ತು.
ಕವಡಿಮಟ್ಟಿ ಕೃಷಿ ವಿಜ್ಞಾನ ಕೇಂದ್ರ ಮುಖ್ಯಸ್ಥ ಡಾ. ಅಮರೇಶ್.ವೈ.ಎಸ್. ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ಶೇಂಗಾ ಬೆಳೆಯಲ್ಲಿ ಕೀಟಬಾಧೆಯಿಂದ ಬೆಳೆ ರಕ್ಷಿಸಲು ಕಡಿಮೆ ವೆಚ್ಚದಲ್ಲಿ ಕೀಟಗಳನ್ನು ಸೆಳೆಯುವ ಮೋಹಕ ಬಲೆಗಳು, ರಸಹೀರುವ ಕೀಟಗಳ ನಿಯಂತ್ರಣ್ಕಾಗಿ ಅಂಟು ಬಲೆಗಳು ಹಾಗೂ ಜೈವಿಕ ಕೀಟನಾಶಕಗಳು ಸಹಕಾರಿಯಾಗಲಿವೆ. ಜೈವಿಕ ಕೀಟನಾಶಕಗಳು ಸಹಕಾರಿಯಾಗಲಿವೆ ಎಂದು ರೈತರಿಗೆ ಮನವರಿಕೆ ಮಾಡಿಕೊಟ್ಟರು.
ಜಿಲ್ಲೆಯಲ್ಲಿ ಬಿತ್ತನೆಯಾದ ಶೇಂಗಾ ಬೆಳೆಯಲ್ಲಿ ರಬ್ಬರ್ ಹುಳುಗಳ ಕಾಣಿಸಿಕೊಂಡಿದ್ದು, ಎಲೆಗಳಲ್ಲಿ ಚಿಕ್ಕ ರಂಧ್ರಗಳು ಕಾಣಿಸಿಕೊಳ್ಳುತ್ತಿವೆ. ವಿಷ ಪಾಷಾಣವನ್ನು ಪ್ರತಿ ಎಕರೆಗೆ 20 ಕಿ. ಗ್ರಾಂ ನಂತೆ ಸಂಜೆ ಸಾಲುಗಳ ಮಧ್ಯೆ ಎರಚಬೇಕು ಎಂದರು.
ಕಲಿಕೆ ಟಾಟಾ ಟ್ರಸ್ಟ್ ಕಾರ್ಯಕ್ರಮ ಅಧಿಕಾರಿ ಅರುಣ ಕುಮಾರ್ ಶಿವರಾಯ ಮಾತನಾಡಿ, ಜೀವನೋಪಾಯ ಕಾರ್ಯಕ್ರಮದ ಪ್ರಮುಖ ಚಟುವಟಿಕೆಗಳಾದ ಮಾದರಿ ಗ್ರಾಮ, ಕೃಷಿ ಮಾಹಿತಿ ಕೇಂದ್ರ ಹಾಗೂ ರೈತ ಸಂಪರ್ಕ ಕೇಂದ್ರ ಜೊತೆಗೂಡಿ ಕೃಷಿ ಇಲಾಖೆಯ ಕಾರ್ಯಕ್ರಮಗಳನ್ನು ಸಣ್ಣ ಮತ್ತು ಅತಿಸಣ್ಣ ರೈತರಿಗೆ ತಲುಪಿಸುವಲ್ಲಿ ಕಳೆದೆರಡು ವರ್ಷಗಳಿಂದ ಮಹತ್ವದ ಪಾತ್ರ ವಹಿಸುತ್ತಿದೆ ಎಂದರು.