ಸುರಪುರ: ಕಳೆದ 4 ವರ್ಷಗಳಿಂದ ಬಂದ್ ಆಗಿದ್ದ (ಮುಚ್ಚಿದ್ದ) ನಗರದ ಉದ್ದಾರ ಓಣಿಯ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆಯನ್ನು ಶನಿವಾರ ಪುನರಾರಂಭ ಮಾಡಲಾಯಿತು.
ಶಾಲೆಯನ್ನು ಸಿಂಗರಿಸಿ, ಅಧಿಕಾರಿಗಳನ್ನು ಸನ್ಮಾನಿಸಲಾಯಿತು.ಮಕ್ಕಳು ಖುಷಿಯಿಂದ ಕುಣಿದಾಡಿದರು.
ಕ್ಷೇತ್ರ ಶಿಕ್ಷಣ ಸಮನ್ವಯಾಧಿಕಾರಿ ಪಂಡಿತ ನಿಂಬೂರ ಮಾತನಾಡಿ, ಸತತವಾಗಿ ಮಕ್ಕಳ ಸಂಖ್ಯೆ ಕ್ಷೀಣಿಸಿದ್ದರಿಂದ 2018 ರಲ್ಲಿ ಈ ಶಾಲೆಯನ್ನು ಬಂದ್ ಮಾಡಲಾಗಿತ್ತು ಎಂದರು.
ಪಾಲಕರು ಶಾಲೆ ಆರಂಭಿಸುವಂತೆ ಡಿಡಿಪಿಐ ಅವರಿಗೆ ಮನವಿ ಸಲ್ಲಿಸಿದ್ದರು.
ಮಕ್ಕಳ ಸಂಖ್ಯೆ ಹೆಚ್ಚಿಸುವ ಬಗ್ಗೆ ಖಾತರಿ ನೀಡಿದ್ದರು. ಕಾರಣ ಮಕ್ಕಳ ಸಂಖ್ಯೆ ಪರಿಶೀಲಿಸಿ ಶಾಲೆ ಆರಂಭಿಸಲಾಯಿತು ಎಂದರು.
11ಕ್ಕಿಂತ ಹೆಚ್ಚು ಮಕ್ಕಳ ಸಂಖ್ಯೆ ಇದ್ದರೆ ಅಲ್ಲಿ ಶಾಲೆ ಆರಂಭಿಸಬೇಕೆನ್ನುವ ನಿಯಮವಿದೆ. ಈಗ ಮಕ್ಕಳ ಸಂಖ್ಯೆ 15 ಕ್ಕೂ ಹೆಚ್ಚು ಇದೆ. ಪಾಲಕರು ಮಕ್ಕಳ ಸಂಖ್ಯೆಯನ್ನು ಹೆಚ್ಚಿಸುವ ಬಗ್ಗೆ ಗಮನಹರಿಸಬೇಕು ಎಂದು ಕರೆ ನೀಡಿದರು.
ಅಧಿಕಾರಿಗಳಾದ ಮೌನೇಶ ಕಂಬಾರ, ಖಾದರಪಟೇಲ, ಶಿವಪುತ್ರ, ಚನ್ನಪ್ಪ ಕ್ಯಾದಗಿ, ಶರಣು ಗೋನಾಲ, ನಿವೃತ್ತ ಬಿಇಓ ಡಿ.ಎಂ. ನಾಯಕ, ಮುಖ್ಯ ಶಿಕ್ಷಕಿ ಇಂದುಮತಿ, ನಗರಸಭೆ ಸದಸ್ಯ ಶಿವಕುಮಾರ ಕಟ್ಟಿಮನಿ, ಭೂನ್ಯಾಯ ಮಂಡಳಿ ಸದಸ್ಯ ಪಾರಪ್ಪ ಗುತ್ತೇದಾರ, ಧರ್ಮರಾಜ ಮಂಗಿಹಾಳ, ಜಟ್ಟೆಪ್ಪ ಇದ್ದರು.