ಸೈದಾಪುರ: ಪಟ್ಟಣದ ವಿದ್ಯಾವರ್ಧಕ ಪ್ರೌಢಶಾಲಾ ವಿದ್ಯಾರ್ಥಿಗಳು ಯಾದಗಿರಿಯಲ್ಲಿ ನಡೆದ ಜಿಲ್ಲಾ ಮಟ್ಟದ ವಿಜ್ಞಾನ ವಸ್ತು ಪ್ರದರ್ಶನದಲ್ಲಿ ರಾಕೆಟ್ ಮತ್ತು ಕ್ಷಿಪಣಿ ಉಡಾವಣೆ ವ್ಯವಸ್ಥೆಯ ಮಾದರಿ ಪ್ರದರ್ಶನ ಮಾಡಿ ಪ್ರಥಮ ಸ್ಥಾನ ಪಡೆದು ರಾಜ್ಯಮಟ್ಟಕ್ಕೆ ಆಯ್ಕೆಯಾಗಿದ್ದಾರೆ.
ಎಸ್ಸೆಸ್ಸೆಲ್ಸಿ ವಿದ್ಯಾರ್ಥಿ ಮುದಾಸ್ಸಿರ್ ಹಾಗೂ ಪ್ರಜ್ವಲ, ಇಂಧನ ಉರಿಸಿದಾಗ ಬಿಡುಗಡೆಯಾಗುವ ಬಿಸಿ ಅನಿಲಗಳು ಹಿಂದಕ್ಕೆ ಚಿಮ್ಮುತ್ತವೆ. ಹಿಂದಕ್ಕೆ ಚಿಮ್ಮಿ ಬರುವ ಬಿಸಿ ಅನಿಲಗಳ ಪ್ರತಿಕಿಯೆಯು ರಾಕೆಟ್ ಮುಮ್ಮುಖ ನೂಕುಬಲವನ್ನು ಒದಗಿಸುತ್ತದೆ. ರಾಕೆಟ್ಟುಗಳು ನಿರ್ವಾತ ಪ್ರದೇಶದಲ್ಲಿ ಕಾರ್ಯ ನಿರ್ವಹಿಸಬಲ್ಲವು ಎನ್ನುವುದು ಸೇರಿದಂತೆ ರಾಕೆಟ್ ಉಡಾವಣೆ, ಕಾರ್ಯನಿವರ್ಹಣೆ ಬಗ್ಗೆ ಸಮಗ್ರವಾಗಿ ವಿವರಿಸಿದರು
‘ವಿದ್ಯಾರ್ಥಿಗಳು ರಾಜ್ಯಮಟ್ಟದಲ್ಲಿ ಪ್ರಥಮ ಸ್ಥಾನ ಪಡೆದು ಇನ್ನೂ ಹೆಚ್ಚಿನ ಸಾಧನೆ ಮಾಡುವಂತಾಗಲಿ. ಇದಕ್ಕೆ ಬೇಕಾದ ಸಹಕಾರ ಡಯಟ್ ವತಿಯಿಂದ ನೀಡಲಾಗುವುದು. ಗ್ರಾಮೀಣ ಭಾಗದ ಮಕ್ಕಳು ಸಾಧನೆ ಇತರರಿಗೆ ಮಾದರಿಯಾಗಲಿ’ ಎಂದು ಡಯೆಟ್ ಪ್ರಾಂಶುಪಾಲ ಕೆ.ಡಿ.ಬಡಿಗೇರಾ ತಿಳಿಸಿದರು.
ಕ್ಷೇತ್ರ ಶಿಕ್ಷಣಾಧಿಕಾರಿ ಅಮೃತಾ ಬಾಯಿ, ನೋಡಲ್ ಅಧಿಕಾರಿ ಶೇಖರಪ್ಪ, ಇಂದಿರಾ, ಬಿಆರ್ಪಿ ಬಂದಪ್ಪೆ ಐರೆಡ್ಡಿ, ನಿರ್ಣರಾಯಕರಾದ ಶ್ಯಾಮರಾವ ಪಾಟೀಲ, ನಾರಾಯಣ ಕುಂಬಾರ, ಗಿರೀಶ ಮೇಟಿ ವಿದ್ಯಾರ್ಥಿಗಳ ಮಾದರಿಗಳನ್ನು ವೀಕ್ಷಣೆ ಮಾಡಿದರು. ವಿಜ್ಞಾನ ಶಿಕ್ಷಕರಾದ ಹನುಮಯ್ಯ ಕಲಾಲ, ರಾಚಯ್ಯ ಸ್ವಾಮಿ ಬಾಡಿಯಲ ಇದ್ದರು.