ನಾರಾಯಣಪುರ: ‘ಗ್ರಾಮೀಣ ಪ್ರದೇಶದ ಶಾಲೆಗಳ ಅಭಿವೃದ್ಧಿಯಲ್ಲಿ ಎಸ್ಡಿಎಂಸಿಗಳ ಪಾತ್ರ ಪ್ರಮುಖ’ ಎಂದು ಮಾರಾನಾಳ ಕ್ಲಸ್ಟರ್ ಸಂಪನ್ಮೂಲ ವ್ಯಕ್ತಿ ನವೀನಕುಮಾರ ಹೇಳಿದರು.
ಸಮೀಪದ ಯಣ್ಣಿವಡಗೇರಿ ಗ್ರಾಮದ ಸರ್ಕಾರಿ ಪ್ರೌಢಶಾಲೆಯಲ್ಲಿ ಪ್ರಸಕ್ತ ಸಾಲಿನ ಎಸ್ಡಿಎಂಸಿ ರಚನಾ ಕಾರ್ಯಕ್ರಮದಲ್ಲಿ ಮಾತನಾಡಿದರು.
ಆಯ್ಕೆಯಾಗಿರುವ ಸದಸ್ಯರು ನಿಯಮಿತವಾಗಿ ಶಾಲೆಗೆ ಭೇಟಿ ನೀಡಿ ಮಕ್ಕಳ ಕಲಿಕೆ ಹಾಗೂ ಶಿಕ್ಷಕರ ಬೋಧನೆ ಹಾಗೂ ಕಾರ್ಯವೈಖರಿ, ಮೂಲಸೌಕರ್ಯಗಳ ಕುರಿತು ನಿಗಾವಹಿಸುವ ಮೂಲಕ ಕಲಿಕೆಗೆ ಪೂರಕವಾದ ವಾತಾವರಣ ನಿರ್ಮಿಸುವತ್ತ ಗಮನ ಹರಿಸಬೇಕು ಎಂದು ಹೇಳಿದರು.
ಮುಖ್ಯಶಿಕ್ಷಕ ಸಂಗಯ್ಯ ಬಿಕ್ಷಾವತಿಮಠ ಸೇರಿದಂತೆ ವಿದ್ಯಾರ್ಥಿಗಳು, ಪಾಲಕರು, ಗ್ರಾಮದ ಪ್ರಮುಖರು ಇದ್ದರು. ಬಸವರಾಜ ಚಾಂದಕವಾಟಗಿ ಸ್ವಾಗತಿಸಿದರು, ಭೀಮಾಶಂಕರ ನಿರೂಪಿಸಿದರು, ಶರಣಪ್ಪ ವಂದಿಸಿದರು.
ಪದಾಧಿಕಾರಿಗಳು: ಅಧ್ಯಕ್ಷರಾಗಿ ಸಾಯಬಣ್ಣ ತೆಗ್ಗಿನಮನಿ, ಸದಸ್ಯರುಗಳಾಗಿ ಹುಲಗಪ್ಪ, ಮೌಲಾಸಾ, ಸಾಹೇಬಗೌಡ, ಧೂಳಪ್ಪ, ಧರೆಪ್ಪ, ಶೇಖವ್ವ ಗುಡಿಮನಿ, ದೇವಮ್ಮ ಮಾವಿನಬಾವಿ, ಭಾಗಮ್ಮ ಮೇಟಿ ಅವರನ್ನು ನೇಮಿಸಲಾಯಿತು.