ಕೆಂಭಾವಿ: ‘ಮನುಷ್ಯನ ಜೀವನ ಸಾರ್ಥಕವಾಗಬೇಕಾದರೆ ಗುರುವಿನ ಸಾಕ್ಷಾತ್ಕಾರವಾಗಬೇಕು’ ಎಂದು ಶರಣ ಬಸನಗೌಡ ಬಿರಾದಾರ ಅಭಿಪ್ರಾಯಪಟ್ಟರು.
ಶ್ರೀಗುರುಕಾಂತೇಶ್ವರ ಜನ ಕಲ್ಯಾಣ ಪ್ರತಿಷ್ಠಾನ, ಪಟ್ಟಣದ ಹಿರೇಮಠ ಸಂಸ್ಥಾನ ಮಠದಲ್ಲಿ ಮಂಗಳವಾರ ಆಯೋಜಿಸಿದ್ದ ಮಾಸಿಕ ಶಿವಾನುಭವ ಚಿಂತನ-ಸಾಂಸ್ಕೃತಿಕ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
ಗುರುವಿನ ಗುಲಾಮನಾಗುವ ತನಕ ದೊರೆಯದಣ್ಣ ಮುಕುತಿ ಎನ್ನುವ ದಾಸರ ವಾಣಿಯಂತೆ ಬಾಲ್ಯ, ಯೌವನ, ಮುಪ್ಪು ಈ ಮೂರು ಹಂತಗಳನ್ನು ದಾಟಬೇಕು. ಅದಕ್ಕೆ ಗುರುವಿನ ಮಾರ್ಗದರ್ಶನ ಬೇಕು ಎಂದು ಹೇಳಿದರು.
ಷಡಕ್ಷರಯ್ಯ ಸ್ವಾಮಿ ಮುದ್ದೆಬಿಹಾಳ ಮಾತನಾಡಿ,‘ಶ್ರೀಮಠದಿಂದ ಜರಗುವ ಈ ಕಾರ್ಯಕ್ರಮ ಶ್ಲಾಘನೀಯವಾದದ್ದು, ಮುಂಬರುವ ದಿನಗಳಲ್ಲಿ ಮುದ್ದೆಬಿಹಾಳದಲ್ಲಿ ಶಿವಾನುಭವ ಚಿಂತನ ಮಂಥನ ಕಾರ್ಯಕ್ರಮ ಆಯೋಜಿಸಲಾಗುವುದು’ ಎಂದು ಹೇಳಿದರು.
ಪೀಠಾಧಿಪತಿ ಚನ್ನಬಸವ ಶಿವಾಚಾರ್ಯರು ಸಾನ್ನಿಧ್ಯ ವಹಿಸಿದ್ದರು. ಡಾ.ಯಂಕನಗೌಡ ಪಾಟೀಲ ನಿರೂಪಿಸಿದರು.
ಸೋಮನಾಥ ಯಾಳಗಿ ಹಾಗೂ ಕಾಳಪ್ಪ ವಿಶ್ವಕರ್ಮ ಅವರಿಂದ ಸಂಗೀತ ಕಾರ್ಯಕ್ರಮ ನಡೆಯಿತು.