ಕೆಂಭಾವಿ: ‘ಮನುಷ್ಯನ ಬದುಕು ಹೂವಾಗಿ ಅರಳಿ ಸುಗಂಧ ಬೀರಬೇಕು’ ಎಂದು ವೇದಾಂತ ಪಂಡಿತ ಜನಾರ್ಧನ ಪಾಣಿಪಾತ ಅಭಿಪ್ರಾಯಪಟ್ಟರು.
ಸಮೀಪದ ಕರಡಕಲ್ ಗ್ರಾಮದ ನಾಲವಾರ ಕೋರಿಸಿದ್ಧೇಶ್ವರ ಶಾಖಾ ಮಠದಲ್ಲಿ ಮಂಗಳವಾರ ನಡೆದ 222ನೇ ಮಾಸಿಕ ಶಿವಾನುಭವ ಚಿಂತನ ಹಾಗೂ ಸತ್ಸಂಗ ಗೋಷ್ಠಿಯಲ್ಲಿ ಮಾತನಾಡಿ, ಸುಂದರ ಮನೆಯಲ್ಲಿ ಹೂ ಬುಟ್ಟಿ ಇದ್ದರೆ, ಎಲ್ಲೆಡೆ ಸುಗಂಧ. ಅದರಂತೆ ಈ ದೇಹವೆಂಬ ಮನೆಯಲ್ಲಿ ಶಾಸ್ತ್ರಗಳೆಂಬ ಹೂವಿನ ಬುಟ್ಟಿಯಿಟ್ಟರೆ ಬಾಳೆಲ್ಲ ಸುಗಂಧವಾಗುತ್ತದೆ ಎಂದರು.
ದೀಪ ಬಾಹ್ಯ ಕತ್ತಲೆಯನ್ನು ಕಳೆದರೆ, ಗುರು ಅಂತರಂಗದ ಅಜ್ಞಾನವನ್ನು ನಿವಾರಿಸಬಲ್ಲ. ಬೆಳಕು ಬದುಕಿಗೆ ದಾರಿ ದೀಪವಾದಾಗ ಜೀವನ ಸಾರ್ಥಕವಾಗುವುದು, ತಪ್ಪು ದಾರಿಯಲ್ಲಿ ನಡೆಯುವ ಗುಂಪಿನ ಜತೆ ಹೆಜ್ಜೆ ಹಾಕುವುದಕ್ಕಿಂತ ಸರಿ ದಾರಿಯಲ್ಲಿ ಏಕಾಂಗಿಯಾಗಿ ನಡೆಯುವುದೇ ಸರಿ ಎಂದು ತಿಳಿಸಿದರು.