ಸುರಪುರ: ಸಗರನಾಡಿನ ಹಿರಿಯ ಸಾಹಿತಿ, ಹೆಮ್ಮೆಯ ಕವಿ ಎ.ಕೃಷ್ಣ ಸುರಪುರ (80) ಅನಾರೋಗ್ಯದಿಂದ ಭಾನುವಾರ ಇಲ್ಲಿ ನಿಧನರಾದರು.
ಅವರಿಗೆ ಪತ್ನಿ, ಪುತ್ರಿ, ಮೂವರು ಪುತ್ರರು ಇದ್ದಾರೆ. ಎದೆಗಡಲ ಮುತ್ತುಗಳು, ಕರುಣ ಕಿರೀಟ, ಗೀತಾಂಜಲಿ, ಮಂತ್ರರಾಜ ಗಾಯತ್ರಿ, ಶ್ರೀಮಚ್ಚಂದ್ರಲಾಂಬ, ಅಣು ಪುರಾಣ ಸೇರಿದಂತೆ ಅನೇಕ ಗ್ರಂಥಗಳನ್ನು ರಚಿಸಿದ್ದಾರೆ. ಯಾದಗಿರಿ ಜಿಲ್ಲಾ ಪ್ರಥಮ ಕನ್ನಡ ಸಾಹಿತ್ಯ ಸಮ್ಮೇಳನದ ಸರ್ವಾಧ್ಯಕ್ಷರಾಗಿದ್ದರು.
ಉದಯೋನ್ಮುಖ ಬರಹಗಾರರ ಪ್ರತಿಭೆ ಗುರುತಿಸಿ, ಅವರಿಗೆ ನೆರವಾಗಿ ಎಲ್ಲ ಹಂತಗಳಲ್ಲಿ ಬೆಂಬಲವಾಗಿ ನಿಂತು ಸಾಹಿತ್ಯ ಕೃಷಿಯಲ್ಲಿ ತೊಡಗಿಸಿದ ಕೀರ್ತಿ ಇವರಿಗೆ ಸಲ್ಲುತ್ತದೆ. ಸರಳ, ಸಜ್ಜನಿಕೆಯ, ಮೃದು ಸ್ವಭಾವದ ವ್ಯಕ್ತಿತ್ವ ಹೊಂದಿದ್ದ ಕೃಷ್ಣ ಅವರು ವೃತ್ತಿಯಿಂದ ಶಿಕ್ಷಕರಾಗಿದ್ದರು. ಚಂಪೂ ಕಾವ್ಯ ಶೈಲಿಯಿಂದ ಹಿಡಿದು ನವ್ಯ ಶೈಲಿಯ ರಚನೆಗಳವರೆಗೆ ಇವರ ಕಾವ್ಯದ ವಿಸ್ತಾರ ಹರಡಿಕೊಂಡಿದೆ. ಅಂತ್ಯಕ್ರಿಯೆ ಸೋಮವಾರ ಬೆಳಿಗ್ಗೆ 10 ಗಂಟೆಗೆ ಸುರಪುರದಲ್ಲಿ ನಡೆಯಲಿದೆ ಎಂದು ಕುಟುಂಬದವರು ತಿಳಿಸಿದ್ದಾರೆ.