ಗುರುಮಠಕಲ್: "ಭ್ರಷ್ಟಾಚಾರದಿಂದಾಗಿ ಮತಕ್ಷೇತ್ರದಲ್ಲಿ ಅಭಿವೃದ್ಧಿ ಕಾರ್ಯಗಳು ಕುಂಠಿತಗೊಂಡಿದ್ದು, ಜನರು ತೀವ್ರ ತೊಂದರೆ ಅನುಭವಿಸುವಂತಾಗಿದೆ' ಎಂದು ನಿಜಶರಣ ಅಂಬಿಗರ ಚೌಡಯ್ಯ ಅಭಿವೃದ್ಧಿ ಮಂಡಳಿ ಅಧ್ಯಕ್ಷ ಬಾಬುರಾವ ಚಿಂಚನಸೂರ ಆರೋಪಿಸಿದರು.
ಪಟ್ಟಣದ ಪ್ರವಾಸಿ ಮಂದಿರದಲ್ಲಿ ಸೋಮವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, "ಗುರುಮಠಕಲ್ ಕ್ಷೇತ್ರದಲ್ಲಿ ನಡೆಯುತ್ತಿರುವ ಭ್ರಷ್ಟಾಚಾರ ಪ್ರಕರಣಗಳನ್ನು ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರ ಗಮನಕ್ಕೆ ತಂದು ಸಮಗ್ರ ತನಿಖೆಗೆ ಒತ್ತಾಯಿಸಲಾಗುವುದು' ಎಂದು ತಿಳಿಸಿದರು.
'ಬೋಗಸ್ ಬಿಲ್, ಕಮಿಷನ್ ದಂಧೆ ಮತ್ತು ಕಳಪೆ ಕಾಮಗಾರಿಯಿಂದಾಗಿ ಜನರು ಬೇಸತ್ತಿದ್ದಾರೆ. ತಮ್ಮ ಅವಧಿಯಲ್ಲಿ ಶಂಕು ಸ್ಥಾಪನೆ ಮಾಡಿದ ಕೆಲಸಗಳು ಈಗ ನಡೆಯುತ್ತಿವೆ. ಕಡೇಚೂರು ಪ್ರದೇಶದಲ್ಲಿ ಕೈಗಾರಿಕಾ ಕೇಂದ್ರ ಸ್ಥಾಪನೆಗೆ ಭೂಸ್ವಾಧೀನ ಮಾಡಲಾಗಿತ್ತು. ಎಲ್ಲವೂ ಸರಿಯಾಗಿದಿದ್ದರೆ ಇಲ್ಲಿ ಕೈಗಾರಿಕೆ ಸ್ಥಾಪನೆಯಾಗಿ ಈ ಭಾಗದ ಯುವಕರಿಗೆ ಉದ್ಯೋಗ ಸಿಗುತ್ತಿತ್ತು. ಆದರೆ ಇಲ್ಲಿನ ಭ್ರಷ್ಟಾಚಾರ, ಜನಪ್ರತಿನಿಧಿಗಳ ನಿರ್ಲಕ್ಷ್ಯದಿಂದ ಕೈಗಾರಿಕೆಗಳು ಬರಲು ಹಿಂದೇಟು ಹಾಕುತ್ತಿವೆ' ಎಂದ ದೂರಿದರು.
'ಬಸವಕಲ್ಯಾಣ ಮತಕ್ಷೇತ್ರದ ಉಪಚುನಾವಣೆಗೆ ನಿಲ್ಲುವಂತೆ ವರಿಷ್ಠರು ಸೂಚಿಸಿದ್ದರು. ಆದರೆ ನಾನು ಸೋತದ್ದು ಗುರುಮಠಕಲ್ ಕ್ಷೇತ್ರದಲ್ಲಿ. ಇಲ್ಲಿನ ಜನರನ್ನು ಮನಸ್ಸನ್ನು ಗೆದ್ದು, ಇಲ್ಲಿಂದಲೇ ಗೆಲ್ಲುತ್ತೇನೆ' ಎಂದರು.
'ತಾಲ್ಲೂಕು ಮತ್ತು ಜಿಲ್ಲಾ ಪಂಚಾಯಿತಿ ಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿಗಳೇ ಗೆಲ್ಲುವಂತೆ ಪಕ್ಷ ಸಂಘಟಿಸುತ್ತೇನೆ. ಬಿಜೆಪಿಯಲ್ಲಿ ಮುಖಂಡರು ಉತ್ತಮ ಸ್ಥಾನಮಾನ ನೀಡಿದ್ದಾರೆ' ಎಂದರು.
ಬಿಜೆಪಿ ಮಂಡಲ ಘಟಕದ ಅಧ್ಯಕ್ಷ ಮಲ್ಲಿಕಾರ್ಜುನ ಹೊನಗೇರಾ, ಜಿಲ್ಲಾ ಘಟಕದ ಮಾಧ್ಯಮ ವಕ್ತಾರ ವೀರಪ್ಪ ಪ್ಯಾಟಿ, ರಾಘವೇಂದ್ರರೆಡ್ಡಿ ವಡವಟ್, ನರಸಿಂಹುಲು ನಿರೇಟಿ, ಜಗದೀಶ ಮೇಂಗಜೀ, ಚಂದುಲಾಲ್ ಚೌದ್ರಿ, ಬಸಣ್ಣ ದೇವರಳ್ಳಿ ಇದ್ದರು.