ಗುರುಮಠಕಲ್ (ಯಾದಗಿರಿ ಜಿಲ್ಲೆ): ಪಟ್ಟಣದ ಇಂದಿರಾನಗರ ಬಡಾವಣೆಯಲ್ಲಿ ಗಾಂಜಾ ಮಾರಾಟದ ವ್ಯವಹಾರ ಮಾಡುತ್ತಿರುವ ಕುರಿತ ಖಚಿತ ಮಾಹಿತಿಯಂತೆ ಬುಧವಾರ ದಾಳಿ ಮಾಡಿದ ಪೊಲೀಸ್ ತಂಡ ₹7,58,000 ಮೌಲ್ಯದ ಗಾಂಜಾ ಹಾಗೂ ಒಬ್ಬನನ್ನು ವಶಕ್ಕೆ ಪಡೆದಿದ್ದಾರೆ.
ಪಟ್ಟಣದ ನಿವಾಸಿ ಮಹಿಪಾಲ ಮುಕುಡಿಯನ್ನು (23) ಬಂಧಿಸಿದ್ದು, ಗಾಂಜಾ ತಂದುಕೊಟ್ಟ ಮಲ್ಲಿಕಾರ್ಜುನ ಮೇತ್ರಿ ಹಾಗೂ ವ್ಯವಹಾರದಲ್ಲಿ ಭಾಗಿಯಾಗಿದ್ದ ನವೀನ ರಾಮುಲು ಪಾಲಮೂರಿ ಪರಾರಿಯಾಗಿದ್ದಾರೆ.
ಇಂದಿರಾನಗರ ಬಡಾವಣೆ ಆಶ್ರಯ ಮನೆಯಲ್ಲಿ ಗಾಂಜಾ ಮಾರಾಟದ ವ್ಯವಹಾರ ನಡೆಯುತ್ತಿರುವಾಗ ದಾಳಿ ಮಾಡಿದಾಗ 758 ಗ್ರಾಂ ಒಣ ಗಾಂಜಾ ಪತ್ತೆಯಾಗಿದ್ದು, ಅದನ್ನು ಪಂಚರ ಸಮಕ್ಷಮ ಪಂಚನಾಮೆ ಮಾಡಲಾಗಿ ₹7,58,000 ಮೌಲ್ಯದ ಗಾಂಜಾ ಎಂದು ಸಾಬೀತಾಗಿದೆ ಎಂದು ಪೊಲೀಸ್ ಸಿಬ್ಬಂದಿ ಮಾಹಿತಿ ನೀಡಿದರು.
ಮೂವರ ವಿರುದ್ಧ ಪ್ರಕರಣ ದಾಖಲಾಗಿದೆ. ಒಬ್ಬರನ್ನು ವಶಕ್ಕೆ ಪಡೆದಿದ್ದು, ಪರಾರಿಯಾದ ಉಳಿದಿಬ್ಬರನ್ನೂ ವಶಕ್ಕೆ ಪಡೆಯಲು ತನಿಖೆ ನಡೆಸುತ್ತಿದ್ದಾರೆ ಎಂದು ಪೊಲೀಸ್ ಇಲಾಖೆ ಮಾಹಿತಿ ನೀಡಿದೆ. ಈ ಕುರಿತು ಗುರುಮಠಕಲ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.