ಶಹಾಪುರ: ತಾಲ್ಲೂಕು ಪಂಚಾಯಿತಿ ನೂತನ ಅಧ್ಯಕ್ಷರಾಗಿ ವನದುರ್ಗ ತಾಲ್ಲೂಕು ಪಂಚಾಯಿತಿ ಕ್ಷೇತ್ರದ ಸದಸ್ಯ ಹಣಮಂತರಾಯ ದೊರೆ ದಳಪತಿ ಅವರು ಸೋಮವಾರ ಅವಿರೋಧವಾಗಿ ಆಯ್ಕೆಯಾಗಿದ್ದಾರೆ.
ಸೋಮವಾರ ನಡೆದ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷದಿಂದ ಹಣಮಂತರಾಯ ಮಾತ್ರ ನಾಮಪತ್ರ ಸಲ್ಲಿಸಿದ್ದರಿಂದ ಅವಿರೋಧವಾಗಿ ಆಯ್ಕೆಯಾಗಿದ್ದಾರೆ ಎಂದು ಚುನಾವಣಾಧಿಕಾರಿ ಶಂಕರಗೌಡ ಸೋಮನಾಳ ತಿಳಿಸಿದರು.
ಅಧ್ಯಕ್ಷ ಸ್ಥಾನವು ಸಾಮಾನ್ಯ ವರ್ಗಕ್ಕೆ ಮೀಸಲಾಗಿತ್ತು. ರಸ್ತಾಪುರ ಕ್ಷೇತ್ರದ ಸದಸ್ಯ ನಾಗಣ್ಣ ಪೂಜಾರಿ ಅಧ್ಯಕ್ಷ ಸ್ಥಾನಕ್ಕೆ ರಾಜೀನಾಮೆ ಸಲ್ಲಿಸಿದ್ದರು. ಇನ್ನುಳಿದ 11 ತಿಂಗಳ ಅವಧಿಗೆ ಹಣಮಂತರಾಯ ದೊರೆ ದಳಪತಿ ಮುಂದುವರೆಲಿದ್ದಾರೆ. ತಾಲ್ಲೂಕು ಪಂಚಾಯಿತಿ ಒಟ್ಟು ಸದಸ್ಯರ ಸಂಖ್ಯೆ 21 ಇದ್ದು, ಅದರಲ್ಲಿ ಕಾಂಗ್ರೆಸ್ 16, ಬಿಜೆಪಿ 3, ಪಕ್ಷೇತರು 2 ಸದಸ್ಯರಿದ್ದಾರೆ. ‘ತಾಲ್ಲೂಕು ಪಂಚಾಯಿತಿ ಸದಸ್ಯರಲ್ಲಿ ಹಿರಿಯರಾಗಿರುವ ಹಣಮಂತರಾಯ ದೊರೆ ದಳಪತಿ ಅವರಿಗೆ ಅವಕಾಶ ನೀಡಬೇಕು ಎಂಬ ಬಯಕೆ ಬಹುದಿನದಿಂದ ಉಳಿದುಕೊಂಡಿತ್ತು. ಅದನ್ನು ಈಗ ಈಡೆರಿಸಿದಂತೆ ಆಗಿದೆ’ ಎಂದು ಶಾಸಕ ಶರಣಬಸಪ್ಪ ದರ್ಶನಾಪುರ ತಿಳಿಸಿದರು.
ಕಾಂಗ್ರೆಸ್ ಮುಖಂಡರಾದ ಶಿವ ಮಹಾಂತ ಚಂದಾಪುರ,ರಾಜಾ ಮಲ್ಪಪ್ಪ ನಾಯಕ, ಗಿರೆಪ್ಪಗೌಡ ಬಾಣತಿಹಾಳ,ಬಸವರಾಜಪ್ಪಗೌಡ ಗೋಗಿ, ಸಯ್ಯದ ಇಬ್ರಾಹಿಂಸಾಬ್ ಜಮದಾರ, ಚೆನ್ನಬಸ್ಸುರಡ್ಡಿ ಚನ್ನೂರ ಇದ್ದರು.