ಶಹಾಪುರ: ನಗರದ ಹೊರವಲಯದ ಮೊರಾರ್ಜಿ ದೇಸಾಯಿ ವಸತಿ ಶಾಲೆಯಲ್ಲಿ (ಬೇವಿನಹಳ್ಳಿ ಕ್ರಾಸ್) ಸೇವೆ ಸಲ್ಲಿಸುತ್ತಿದ್ದ ಸಮಾಜ ವಿಜ್ಞಾನ ಶಿಕ್ಷಕಿ ಬಸಮ್ಮ ಪಾಟೀಲ್ ಹಾಗೂ ಆಂಗ್ಲ ಭಾಷೆಯ ಶಿಕ್ಷಕಿ ಸುಮಂಗಲಾದೇವಿ ಅವರನ್ನು ಕರ್ತವ್ಯ ಲೋಪದ ಮೇಲೆ ಕರ್ನಾಟಕ ವಸತಿ ಶಿಕ್ಷಣ ಸಂಸ್ಥೆಗಳ ಸಂಘದ ಕಾರ್ಯನಿರ್ವಾಹಕ ನಿರ್ದೇಶಕ ಸಿದ್ದೇಶ್ವರ ಎನ್ ಅಮಾನತುಗೊಳಿಸಿದ್ದಾರೆ.
ಅಲ್ಲದೆ ನಗರದ ಹೊರವಲಯದ ಮೊರಾರ್ಜಿ ದೇಸಾಯಿ ವಸತಿ ಶಾಲೆಯಲ್ಲಿ (ಬೇವಿನಹಳ್ಳಿ ಕ್ರಾಸ್) ಹೊರ ಸಂಪನ್ಮೂಲದ ಮೂಲಕ ಶೂಶ್ರೂಷಕರಾಗಿ ಕಾರ್ಯನಿರ್ವಹಿಸುತ್ತಿರುವ ಸಿದ್ದಣ್ಣಗೌಡ ಪಾಟೀಲ್ ಅವರನ್ನು ಹಾಗೂ ಎಲ್ಲಾ ಅಡುಗೆ ಸಿಬ್ಬಂದಿಯನ್ನು ಸಂಬಂಧಿಸಿದ ಏಜೆನ್ಸಿಯವರಿಗೆ ಹಿಂದಿರುಗಿಸಿ. ಖಾಲಿ ಇರುವ ಉತ್ತಮ ಹಾಗೂ ಯೋಗ್ಯ ಸಿಬ್ಬಂದಿಯನ್ನು ಒದಗಿಸಲು ಏಜೆನ್ಸಿಯವರಿಗೆ ಸೂಚಿಸಲು ತಿಳಿಸಲಾಗಿದೆ ಎಂದು ಕರ್ನಾಟಕ ವಸತಿ ಶಿಕ್ಷಣ ಸಂಸ್ಥೆಗಳ ಸಂಘದ ಕಾರ್ಯನಿರ್ವಾಹಕ ನಿರ್ದೇಶಕರು ತಿಳಿಸಿದ್ದಾರೆ.
ವಸತಿ ಶಾಲೆಯ ವಿದ್ಯಾರ್ಥಿಗಳು ಮಾ.21ರಂದು ತರಗತಿ ಬಹಿಷ್ಕರಿಸಿ ನಾಲ್ಕು ಕಿ.ಮೀ ವರೆಗೆ ಪಾದಯಾತ್ರೆ ನಡೆಸಿ ದೋರನಹಳ್ಳಿ ಗ್ರಾಮದ ಬಳಿ ಪ್ರತಿಭಟನೆ ನಡೆಸಿದ್ದರು. ವಸತಿನಿಲಯದ ಮೇಲ್ವಿಚಾರಕರನ್ನು ಹಾಗೂ ಸಮಾಜ ವಿಜ್ಞಾನ, ಆಂಗ್ಲಭಾಷೆ ಶಿಕ್ಷಕರನ್ನು ವರ್ಗಾಯಿಸುವಂತೆ ಆಗ್ರಹಿಸಿದ್ದರು.