ಶಹಾಪುರ: ತಾಲ್ಲೂಕಿನ ಮದ್ರಿಕಿ ಗ್ರಾಮದಲ್ಲಿ ಶುಕ್ರವಾರ ರಸ್ತೆ ಅಪಘಾತದಲ್ಲಿ ಮಗ ಶಿವಕುಮಾರ ಬಸವರಾಜ (24) ಮೃತಪಟ್ಟಿದ್ದನ್ನು ಸಹಿಸಲು ಆಗದೇ ತಂದೆ ಬಸವರಾಜ ಶರಣಪ್ಪ (52) ಶನಿವಾರ ಆತ್ಮಹತ್ಯೆ ಮಾಡಿಕೊಂಡಿದ್ದಾರೆ.
ಶಿವಕುಮಾರ ಶುಕ್ರವಾರ ರಾತ್ರಿ ಅಪಘಾತಕ್ಕೀಡಾಗಿ ಮೃತಪಟ್ಟರು. ಆದರೆ, ಆ ನೋವನ್ನು ಅರಗಿಸಿಕೊಳ್ಳಲು ಆಗದೇ ಬಸವರಾಜ ಶನಿವಾರ ಬೆಳಗಿನ ಜಾವ ಬಾವಿಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.
ಅಗ್ನಿಶಾಮಕ ಠಾಣಾಧಿಕಾರಿ ಮುತೇಂದ್ರನಾಥ ಅವರ ನೇತೃತ್ವದ ತಂಡ ಕಾರ್ಯಚರಣೆ ನಡೆಸಿ ಬಾವಿಯಿಂದ ಶವವನ್ನು ಹೊರತೆಗೆದರು. ತಂದೆ ಹಾಗೂ ಮಗನ ಮರಣೋತ್ತರ ಪರೀಕ್ಷೆ ನಡೆಸಿ, ಶನಿವಾರ ಅಂತ್ಯಕ್ರಿಯೆ ನೆರವೇರಿತು.
ಬಸವರಾಜಗೆ ಪತ್ನಿ ಮತ್ತು ಇಬ್ಬರು ಪುತ್ರಿಯರು ಇದ್ದಾರೆ. ಭೀಮರಾಯನಗುಡಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.