ಯಾದಗಿರಿ: ನಾಡಿನಲ್ಲಿ ಆಧುನಿಕತೆಯ ಪ್ರಭಾವದಿಂದ ಕನ್ನಡ ಭಾಷೆ, ಕಲೆ, ಸಂಸ್ಕೃತಿಗೆ ಧಕ್ಕೆಯಾಗುತ್ತಿದೆ. ಕನ್ನಡ ಪರ ಸಂಘಟನೆಗಳು ಗಡಿ ಭಾಗಗಳಲ್ಲಿ ಭಾಷೆಯನ್ನು ಗಟ್ಟಿಗೊಳ್ಳುವ ನಿಟ್ಟಿನಲ್ಲಿ ಕೆಲಸ ಮಾಡಿದಾಗ ಮಾತ್ರ ನಾಡು ಸುರಕ್ಷಿತ ಎಂದು ಗುರುಮಠಕಲ್ ಖಾಸಾಮಠದ ಪೀಠಾಧಿಪತಿ ಮುರುಘರಾಜೇಂದ್ರ ಶಾಂತವೀರ ಸ್ವಾಮೀಜಿ ನುಡಿದರು.
ನಗರದ ಎನ್ವಿಎಂ ಆವರಣದಲ್ಲಿ ನಮ್ಮ ಕರುನಾಡ ರಕ್ಷಣಾ ವೇದಿಕೆ ಜಿಲ್ಲಾ ಘಟಕ ಭಾನುವಾರ ಹಮ್ಮಿಕೊಂಡಿದ್ದ 65ನೇ ಕನ್ನಡ ರಾಜ್ಯೋತ್ಸವ ಹಾಗೂ ರಸಮಂಜರಿ ಕಾರ್ಯಕ್ರಮದ ಸಾನ್ನಿಧ್ಯ ವಹಿಸಿ ಆಶೀರ್ವಚನ ನೀಡಿದರು.
ಹನ್ನೆರಡನೇ ಶತಮಾನದ ಶರಣರು ಆಡು ಭಾಷೆಯಾದ ಕನ್ನಡದಲ್ಲಿಯೇ ವಚನಗಳನ್ನು ರಚಿಸುವ ಮೂಲಕ ಕನ್ನಡವನ್ನು ಜನರ ಭಾಷೆಯನ್ನಾಗಿ ಮಾಡಿದರು ಎಂದರು.
ಕಾರ್ಯಕ್ರಮ ಉದ್ಘಾಟಿಸಿದ ಶಾಸಕ ವೆಂಕಟರೆಡ್ಡಿ ಮುದ್ನಾಳ ಮಾತನಾಡಿ, ಕನ್ನಡಪರ ಸಂಘಟನೆಗಳು ಸದಾ ಜನಪರ ಕೆಲಸಗಳಲ್ಲಿ ತೊಡಗಿಕೊಳ್ಳುವ ಮೂಲಕ ನಾಡಿನ ಪ್ರಗತಿಗೆ ತಮ್ಮದೇ ಆದ ಕೊಡುಗೆ ನೀಡಬೇಕು ಎಂದು ಕರೆ ನೀಡಿದರು.
ಅಧ್ಯಕ್ಷತೆ ವಹಿಸಿದ ಸಂಘಟನೆ ಜಿಲ್ಲಾ ಘಟಕ ಅಧ್ಯಕ್ಷ ರವಿ ಕೆ.ಮುದ್ನಾಳ ಮಾತನಾಡಿ, ಹಿರಿಯರ ಮಾರ್ಗದರ್ಶನದಲ್ಲಿ ನಾಡಿನ ಸೇವೆಯ ಜೊತೆಗೆ ನಮ್ಮ ಸಂಘಟನೆ ಬಡ ಜನರ ಪರ ಕೆಲಸ ಮಾಡಿಕೊಂಡು ನ್ಯಾಯ ಒದಗಿಸಿಕೊಡಲು ಪ್ರಯತ್ನಿಸುತ್ತಿದೆ ಎಂದರು.
ಸಂಘಟನೆಯ ರಾಜ್ಯ ಉಪಾಧ್ಯಕ್ಷ ಗಂಗಾಧರ ಕುಂಬಾರ, ರೈತ ಸಂಘ ರಾಜ್ಯ ಉಪಾಧ್ಯಕ್ಷ ಲಕ್ಷ್ಮೀಕಾಂತ ಪಾಟೀಲ, ಮೋಹನಬಾಬು, ಮಹಾದೇವಪ್ಪ ಯಲಸತ್ತಿ, ನಾಗಪ್ಪಮಾಲಿ ಪಾಟೀಲ, ಸುರೇಶ ರಾಠೋಡ, ಲಕ್ಷ್ಮೀಪುತ್ರ ಪಾಟೀಲ, ಭೀಮರೆಡ್ಡಿ ಹಂದರಕಿ ಇದ್ದರು.
ನಂತರ ಮಕ್ಕಳ ಸಾಂಸ್ಕೃತಿಕ ಕಾರ್ಯಕ್ರಮ ಹಾಗೂ ರಸಮಂಜರಿ ಜನಮನ ಸೆಳೆಯಿತು. ಶಂಕರ ಚವ್ಹಾಣ ಸ್ವಾಗತಿಸಿದರು. ಗುರುಪ್ರಸಾದ ವೈದ್ಯ ನಿರೂಪಿಸಿ, ವಂದಿಸಿದರು.