ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ಸಿದ್ಧರಾಮ ಶಿವಯೋಗಿಗಳ ಕಾಯಕ ತತ್ವ ಅನುಸರಿಸಿ’

ಸಿದ್ಧರಾಮ ಶಿವಯೋಗಿ ಜಯಂತ್ಯುತ್ಸವದಲ್ಲಿ ಹೆಚ್ಚುವರಿ ಜಿಲ್ಲಾಧಿಕಾರಿ ಪ್ರಕಾಶ್ ಜಿ.ರಜಪೂತ
Last Updated 18 ಜನವರಿ 2019, 13:27 IST
ಅಕ್ಷರ ಗಾತ್ರ

ಯಾದಗಿರಿ:‘12ನೇ ಶತಮಾನದಲ್ಲಿ ಸಮಾಜದ ಒಳಿತಿಗಾಗಿ ಕಾಯಕದ ಮೂಲಕ ಸರಿದಾರಿ ತೋರಿದ ಸೊನ್ನಲಿಗಿಯ ಸಿದ್ಧರಾಮ ಶಿವಯೋಗಿಗಳ ಕಾಯಕ ತತ್ವವನ್ನು ಪ್ರತಿಯೊಬ್ಬರೂ ಅಳವಡಿಸಿಕೊಳ್ಳಬೇಕು’ ಎಂದು ಹೆಚ್ಚುವರಿ ಜಿಲ್ಲಾಧಿಕಾರಿ ಪ್ರಕಾಶ್ ಜಿ.ರಜಪೂತ ಸಲಹೆ ನೀಡಿದರು.

ನಗರದ ವಿದ್ಯಾಮಂಗಲ ಕಾರ್ಯಾಲಯದಲ್ಲಿ ಶುಕ್ರವಾರ ಜಿಲ್ಲಾಡಳಿತ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ, ನಗರಸಭೆ, ಜಿಲ್ಲಾ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ, ಸಾರ್ವಜನಿಕ ಶಿಕ್ಷಣ ಇಲಾಖೆ ಹಾಗೂಸಿದ್ಧರಾಮ ಶಿವಯೋಗಿ ಜಯಂತ್ಯುತ್ಸವ ಸಮಿತಿ ಆಶ್ರಯದಲ್ಲಿ ಹಮ್ಮಿಕೊಂಡಿದ ಸಿದ್ಧರಾಮ ಶಿವಯೋಗಿ ರವರ ಜಯಂತ್ಯುತ್ಸವ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.

‘ಸಿದ್ಧರಾಮ ಶಿವಯೋಗಿಗಳು ಸರಳ, ಅರ್ಥಗರ್ಭಿತವಾದ ಅನೇಕ ವಚನಗಳನ್ನು ರಚಿಸುವ ಮೂಲಕ ಸಮಾಜದ ತಪ್ಪುಗಳನ್ನು ತಿದ್ದಿದರು. ಅವರು ತಮ್ಮ ಕಾಯಕ ತತ್ವದ ಮೂಲಕ ಲೋಕೋಪಯೋಗಿ ಕಾರ್ಯಗಳನ್ನು ಕೈಗೊಂಡು ಇಂದಿಗೂ ನಮಗೆ ದಾರಿದೀಪವಾಗಿದ್ದಾರೆ. ಆದ್ದರಿಂದ, ಅವರ ತತ್ವ ಸಿದ್ಧಾಂತಗಳನ್ನು ಅನುಸರಿಸಿಕೊಂಡು ಮಹಾಪುರುಷರು ನಡೆದ ದಾರಿಯಲ್ಲಿ ಸಾಗಬೇಕಾಗಿದೆ’ ಎಂದು ಸಲಹೆ ನೀಡಿದರು.

ಲಿಂಗೇರಿ ಕೋನಪ್ಪ ಮಹಿಳಾ ಕಾಲೇಜಿನ ಉಪನ್ಯಾಸಕಿ ಡಾ.ಜ್ಯೋತಿಲತಾ ತಡಿಬಿಡಿಮಠ ಉಪನ್ಯಾಸ ನೀಡಿ,‘1125ರಲ್ಲಿ ಸೊಲ್ಲಾಪುರದ ಸೊನ್ನಲಗಿಯ ಮುದ್ದಣಗೌಡ ಸುಕಲಾಬಾಯಿ ಎಂಬ ದಂಪತಿಗಳ ಮಗನಾಗಿ ಸಿದ್ಧರಾಮ ಶಿವಯೋಗಿಗಳು ಜನಿಸಿದರು. ಬಾಲ್ಯಾವಸ್ಥೆಯಲ್ಲಿ ದನ ಕಾಯುವ ಕಾಯಕದ ಮೂಲಕ ಶ್ರೀಶೈಲದ ಕಮರಿಯಲ್ಲಿ ದೇವರ ಸಾಕ್ಷಾತ್ಕಾರ ಪಡೆದು ಸಾಮಾನ್ಯರಂತೆ ಬದುಕಿದರು’ ಎಂದರು.

‘ಸಿದ್ಧರಾಮನು ಮಹಾನ್ ಕಾಯಕ ಯೋಗಿಯಾಗಿದ್ದರು. ಅನೇಕ ಕೆರೆ, ಕಟ್ಟೆ, ಬಾವಿ ಹಾಗೂ ದೇವಾಲಯಗಳನ್ನು ನಿರ್ಮಾಣ ಮಾಡಿದರು. ಧ್ಯಾನ, ಕಾಯಕ, ದಾಸೋಹಕ್ಕೆ ಹೆಸರಾಗಿದ್ದ ಇವರು ಕಪಿಲ ಸಿದ್ದ ಮಲ್ಲಿಕಾರ್ಜುನ ಎಂಬ ಅಂಕಿತನಾಮದಿಂದ ಸುಮಾರು 68 ಸಾವಿರ ವಚನಗಳನ್ನು ರಚಿದ್ದಾರೆ. ಆದರೆ, 29 ಸಾವಿರ ವಚನಗಳು ಮಾತ್ರ ಲಭ್ಯವಿದ್ದು, ಉಳಿದ ವಚನಗಳ ಕುರಿತು ಸಂಶೋಧನೆ ಮಾಡಬೇಕಾಗಿದೆ.ದ್ಧರಾಮ ಶಿವಯೋಗಿಗಳ ಕುರಿತು ಅನೇಕ ಸಂಶೋಧನಾ ಕೃತಿಗಳು ರಚನೆಗೊಂಡಿವೆ’ ಎಂದು ವಿವರಿಸಿದರು.

‘ವ್ಯಕ್ತಿತ್ವ ವಿಕಸನಕ್ಕೆ ಕಾಯಕ ತತ್ವ ಮದ್ದಾಗಿದ್ದು, ಕಾಯಕ ತತ್ವ ನಮ್ಮ ವರ್ತನೆಗಳನ್ನು ಶುದ್ಧ ಮಾಡುತ್ತದೆ. ಜ್ಞಾನ, ಸದ್ಗತಿಗೆ ಕಾಯಕ ಪೂರಕವಾಗಿದೆ. ಮನಸ್ಸಿನ ಮಾಲಿನ್ಯ ತೊಳೆಯಲು ಕಾಯಕ ಮುಖ್ಯವಾಗಿದೆ ಎಂದು ಸಿದ್ಧರಾಮ ಶಿವಯೋಗಿಗಳು ನಿರಂತರ ಕಾಯಕ ಪ್ರೇಮ ಮೆರೆದರು’ ಎಂದು ಬಣ್ಣಿಸಿದರು.

ಎಎಸ್‌ಐ ಈರಣ್ಣ, ಭೋವಿ ಸಮಾಜದ ಜಿಲ್ಲಾ ಅಧ್ಯಕ್ಷರಾದ ನಾಗಪ್ಪ ಬೆನಕಲ್ ಸೇರಿದಂತೆ ಸಮಾಜದ ಮುಖಂಡರು ಹಾಗೂ ಸಾರ್ವಜನಿಕರು ಭಾಗವಹಿಸಿದ್ದರು. ಸಂಗೀತ ಶಿಕ್ಷಕ ಚಂದ್ರಶೇಖರ ಗೋಗಿ ಕಲಾ ತಂಡದವರು ನಾಡಗೀತೆ ಹಾಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT