ಸುರಪುರ: ‘ವಿದ್ಯಾರ್ಥಿಗಳು ಪಠ್ಯ ಚಟುವಟಿಕೆಗೆ ನೀಡುವಷ್ಟು ಮಹತ್ವ ಕ್ರೀಡೆಗೂ ನೀಡಬೇಕು. ಕ್ರೀಡೆಯಲ್ಲಿ ಭಾಗವಹಿಸುವಂತೆ ಉಪನ್ಯಾಸಕರು ವಿದ್ಯಾರ್ಥಿಗಳನ್ನು ಪ್ರೋತ್ಸಾಹಿಸಬೇಕು’ ಎಂದು ರಾಷ್ಟ್ರೀಯ ಹಾಕಿ ಆಟಗಾರ ಸೈಯದ್ ನದಿಮುದ್ದೀನ್ಹೇಳಿದರು.
ಹಸನಾಪುರದ ನಿಷ್ಠಿ ಎಂಜಿನಿಯರಿಂಗ್ ಕಾಲೇಜಿನಲ್ಲಿ ಶುಕ್ರವಾರ ಹಮ್ಮಿಕೊಂಡಿದ್ದ ಕ್ರೀಡಾ ಸಪ್ತಾಹ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
‘ಮನುಷ್ಯ ದೈಹಿಕ ಮತ್ತು ಮಾನಸಿಕ ಒತ್ತಡದಿಂದ ದೂರುವಾಗಲು ಕ್ರೀಡೆ ಸಹಕಾರಿಯಾಗಿದೆ. ವಿದ್ಯಾರ್ಥಿ ದೆಸೆಯಲ್ಲೇ ಕ್ರೀಡೆಗಳಲ್ಲಿ ಭಾಗವಹಿಸುವುದರಿಂದ ಮಾನಸಿಕ ಹಾಗೂ ದೈಹಿಕವಾಗಿ ಸದೃಢರಾಗಲು ಸಾಧ್ಯ’ ಎಂದರು.
ಕಾಲೇಜಿನ ಜಂಟಿ ಕಾರ್ಯದರ್ಶಿ ದೊಡ್ಡಪ್ಪ ನಿಷ್ಠಿ ಮಾತನಾಡಿ, ‘ನಿತ್ಯವೂ ಕ್ರೀಡೆಗಳಲ್ಲಿ ಭಾಗವಹಿಸುವುದರಿಂದ ಉತ್ತಮ ಆರೋಗ್ಯ ಕಂಡುಕೊಳ್ಳಬಹುದು. ಉತ್ತಮ ಆರೋಗ್ಯವಿದ್ದರೆ ಒಳ್ಳೆಯ ಮನಸ್ಸು ನಮ್ಮದಾಗುತ್ತದೆ. ಓದಿನಲ್ಲಿ ಏಕಾಗೃತೆ ಮೂಡುತ್ತದೆ’ ಎಂದರು.
ಶಿಕ್ಷಣ ತಜ್ಞ ಸೈಯದ್ ಅನ್ವರ್ ಮಾತನಾಡಿ, ‘ಗ್ರಾಮೀಣ ಮಟ್ಟದ ವಿದ್ಯಾರ್ಥಿಗಳು ರಾಷ್ಟ್ರೀಯ, ಅಂತಾರಾಷ್ಟ್ರೀಯ ಕ್ರೀಡಾಪಟುಗಳನ್ನು ಮಾದರಿಯಾಗಿಟ್ಟುಕೊಂಡು ಅಥ್ಲಿಟಿಕ್ಸ್, ಕಬಡ್ಡಿ, ಹಾಕಿ, ಫುಟ್ಬಾಲ್, ಬ್ಯಾಡ್ಮಿಂಟನ್ ಮತ್ತಿತರ ಕ್ರೀಡೆಗಳತ್ತ ಆಕರ್ಷಿತರಾಗಬೇಕು’ ಎಂದರು.
ಪ್ರಾಂಶುಪಾಲ ಡಾ. ನಾಗರಾಳೆ, ಬೋಧಕ-ಬೋ ಧಕೇತರ ಸಿಬ್ಬಂದಿಗಳು ಇದ್ದರು. ದೈಹಿಕ ಶಿಕ್ಷಕ ನಾಗಭೂಷಣ ಯಾಳಗಿ ನಿರೂಪಿಸಿವಂದಿಸಿದರು.