ಸೈದಾಪುರ: ‘ಮಕ್ಕಳನ್ನು ಕೂಲಿ ಕಾರ್ಮಿಕರನ್ನಾಗಿ ಮಾಡದೆ ಉತ್ತಮ ಶಿಕ್ಷಣ ಕೊಡಿಸುವುದು ನಮ್ಮೆಲ್ಲರ ಜವಾಬ್ದಾರಿ’ ಜಿಲ್ಲಾ ಬಾಲಕಾರ್ಮಿಕ ಯೋಜನಾ ನಿರ್ದೇಶಕರಾದ ರಿಯಾಜ್ ಪಟೇಲ್ ವರ್ಕನಳ್ಳಿ ತಿಳಿಸಿದರು.
ಪಟ್ಟಣದ ಚರ್ಚ್ ಸಮೀಪದ ಆವರಣದಲ್ಲಿ ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ, ಜಿಲ್ಲಾ ಕಾರ್ಮಿಕ ಇಲಾಖೆ, ಜಿಲ್ಲಾ ಬಾಲಕಾರ್ಮಿಕ ಯೋಜನಾ ಸೊಸೈಟಿ ಹಾಗೂ ಕಾಡಂಗೇರಾ ಕಲ್ಯಾಣ ಕರ್ನಾಟಕ ಗ್ರಾಮೀಣ ಅಭಿವೃದ್ಧಿ ಶಿಕ್ಷಣ ಸಂಸ್ಥೆ ಸಂಯುಕ್ತ ಆಶ್ರಯದಲ್ಲಿ ಹಮ್ಮಿಕೊಂಡ ಬೀದಿ ನಾಟಕ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದರು.
ನಂತರ ಕಲ್ಯಾಣ ಕರ್ನಾಟಕ ಗ್ರಾಮೀಣ ಅಭಿವೃದ್ಧಿ ಮತ್ತು ಶಿಕ್ಷಣ ಸಂಸ್ಥೆ ಅಧ್ಯಕ್ಷ ಶರಣು.ಎಸ್.ಕಾಡಂಗೇರಾ ಮಾತನಾಡಿ, 14 ರಿಂದ 18 ವರ್ಷದೊಳಗಿನ ಕಿಶೋರ ಕಾರ್ಮಿಕರಿಗೆ ಅಪಾಯಕಾರಿ ವಲಯದಲ್ಲಿ ದುಡಿಸಿಕೊಂಡರೆ ದಂಡದ ಜತೆ ಶಿಕ್ಷೆಯನ್ನೂ ನೀಡುತ್ತದೆ. ಕಾರಣ ಮಕ್ಕಳಿಗೆ ಉತ್ತಮ ಶಿಕ್ಷಣ ಕೊಡುವುದು ನಮ್ಮ ಜವಾಬ್ದಾರಿ ಎಂದು ಹೇಳಿದರು.
ಮುಖಂಡರಾದ ಹಣಮಂತ ನಾಟೇಕಾರ, ದೇವಿಂದ್ರಪ್ಪ ಬಾಗ್ಲಿ, ಸಿದ್ದೇಶ್ವರ ಕಲಾ ತಂಡದ ಮುಖ್ಯಸ್ಥ ಶರಣಯ್ಯ ಸ್ವಾಮಿ ಹಿರೇಮಠ, ಚಂದ್ರಕಾಂತ ಆಳಂದ, ಮಲ್ಲಿಕಾರ್ಜುನ ಬಾಗೇವಾಡಿ, ಜ್ಯೋತಿ ಬಾಗೆವಾಡಿ ಕಮಲ ಬಾಗೇವಾಡಿ, ಪ್ರಕಾಶ ಬಾಗೆವಾಡಿ, ವಿದ್ಯಾರ್ಥಿಗಳು, ಗ್ರಾಮಸ್ಥರು ಸೇರಿದಂತೆ ಇತರರಿದ್ದರು.