ಶಹಾಪುರ (ಯಾದಗಿರಿ ಜಿಲ್ಲೆ): ವಸತಿ ನಿಲಯದ ಅಡುಗೆ ಸಹಾಯಕಿಯ ಮೊಬೈಲ್ ಕಳವು ಆರೋಪದಿಂದ ಮನನೊಂದು 9ನೇ ತರಗತಿ ವಿದ್ಯಾರ್ಥಿನಿ, ಅರಳಹಳ್ಳಿ ಗ್ರಾಮದ ಲಕ್ಷ್ಮಿ ಮಲ್ಲಪ್ಪ (15) ಬುಧವಾರ ಬಾವಿಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿದ್ದಾಳೆ.
ಕಲಬುರ್ಗಿಯ ಎನ್.ವಿ. ಪ್ರೌಢಶಾಲೆಯಲ್ಲಿ ಓದುತ್ತಿದ್ದ ಲಕ್ಷ್ಮಿ, ವಿದ್ಯಾನಗರದ ಸರ್ಕಾರಿ ಬಾಲಕಿಯರ ವಸತಿ ನಿಲಯದಲ್ಲಿ ಇರುತ್ತಿದ್ದಳು. ವಸತಿ ನಿಲಯದ ಅಡುಗೆ ಸಹಾಯಕಿಯ ಮೊಬೈಲ್ ಕಳವಾಗಿತ್ತು. ಆ ಮೊಬೈಲ್ ಲಕ್ಷ್ಮಿ ಬ್ಯಾಗ್ನಲ್ಲಿ ಪತ್ತೆಯಾಗಿತ್ತು.
‘ಅಡುಗೆ ಸಹಾಯಕಿ ಅವಾಚ್ಯ ಶಬ್ದಗಳಿಂದ ನಿಂದಿಸಿದ್ದರು. ಇದರಿಂದ ಮನನೊಂದು ವಿದ್ಯಾರ್ಥಿನಿ ಸ್ವಂತ ಗ್ರಾಮ ಅರಳಹಳ್ಳಿಗೆ ಬಂದಿದ್ದರು. ಮಂಗಳವಾರ ಮರಳಿ ವಸತಿ ನಿಲಯಕ್ಕೆ ತೆರಳುವಂತೆ ಪಾಲಕರು ಸೂಚಿಸಿದ್ದರು. ವಸತಿ ನಿಲಯಕ್ಕೆ ವಾಪಸಾಗಲು ಹೆದರಿ ಗ್ರಾಮದಲ್ಲಿರುವ ಬಾವಿಗೆ ಹಾರಿ ಮೃತಪಟ್ಟಿದ್ದಾಳೆ’ ಎಂದು ಲಕ್ಷ್ಮಿಯ ಪಾಲಕರು ಆರೋಪಿಸಿದ್ದಾರೆ.