ಶಹಾಪುರ: ವಸತಿ ನಿಲಯದ ವಿದ್ಯಾರ್ಥಿಗಳ ಏಕಾಏಕಿ ಸ್ಥಳಾಂತರವನ್ನು ವಿರೋಧಿಸಿ ಕರ್ನಾಟಕ ರಾಜ್ಯ ದಲಿತ ಸಂಘರ್ಷ ಸಮಿತಿಯ ಕಾರ್ಯಕರ್ತರು ಮತ್ತು ವಿದ್ಯಾರ್ಥಿಗಳು ತಾಲ್ಲೂಕು ಪಂಚಾಯಿತಿ ಕಚೇರಿ ಮುಂದೆ ಸೋಮವಾರ ಪ್ರತಿಭಟನೆ ನಡೆಸಿದರು.
ನಗರದಲ್ಲಿ ಮೆಟ್ರಿಕ್ ನಂತರದ ಪರಿಶಿಷ್ಟ ಜಾತಿಯ ಬಾಲಕರ ವಸತಿ ನಿಲಯದ ಕಟ್ಟಡ ನಿರ್ಮಾಣ ಮಾಡಲಾಗಿದೆ. ಆದರೆ, ಅಧಿಕಾರಿಗಳು ನಾಮಫಲಕ ಬದಲಾಯಿಸಿ ಅಲ್ಲಿ ಬಾಲಕಿಯರಿಗೆ ಅವಕಾಶ ನೀಡಿದ್ದಾರೆ. ಏಕಾಏಕಿ ಬಾಲಕರನ್ನು ಮತ್ತೊಂದು ಕಡೆ ಸ್ಥಳಾಂತರಿಸಲಾಗಿದೆ ಎಂದು ಸಮಿತಿಯ ಜಿಲ್ಲಾ ಸಂಘಟನಾ ಚಾಲಕ ಹೊನ್ನಪ್ಪ ಗಂಗನಾಳ ಹೇಳಿದರು.
ಬಾಲಕಿಯರ ಸುರಕ್ಷತೆ ಮತ್ತು ಕಾಳಜಿವಹಿಸುವುದಕ್ಕೆ ನಮ್ಮ ಅಭ್ಯಂತರವಿಲ್ಲ. ಆದರೆ, ಬಾಲಕರನ್ನುದಿಢಿರನೇ ಬೇರೆ ಕಡೆ ಸ್ಥಳಾಂತರಿಸುವುದು ಆತುರದ ನಿರ್ಧಾರ. ಈಗಿರುವ ಬಾಲಕರ ವಸತಿ ನಿಲಯದಲ್ಲಿ ಸರಿಯಾದ ವ್ಯವಸ್ಥೆ ಇಲ್ಲ. ಗುಣಮಟ್ಟದ ಊಟ ಸಿಗುತ್ತಿಲ್ಲ. ಕನ್ನಡ ದಿನಪತ್ರಿಕೆ ಸಹ ಬರುತ್ತಿಲ್ಲ. ತಕ್ಷಣವೇ ಅಧಿಕಾರಿಗಳು ಈ ಬಗ್ಗೆ ಗಮನಹರಿಸಬೇಕು. ವಿದ್ಯಾರ್ಥಿಗಳನ್ನು ನಿರ್ಮಾಣವಾದ ವಸತಿ ನಿಲಯಕ್ಕೆ ವಿದ್ಯಾರ್ಥಿಗಳನ್ನು ಕಳುಹಿಸುವ ವ್ಯವಸ್ಥೆ ಮಾಡಬೇಕು ಎಂದು ಆಗ್ರಹಿಸಿದರು.
ತಾ.ಪಂ ಇಒ ಜಗನ್ನಾಥ ಮೂರ್ತಿಗೆ ಅವರಿಗೆ ಮನವಿ ಸಲ್ಲಿಸಲಾಯಿತು. ಪ್ರತಿಭಟನೆಯಲ್ಲಿ ಮಂಜು ಸೈದಾಪುರ, ರಾಜು ಯಶವಂತ, ಧರ್ಮರಾಜ, ರಮೇಶ, ಮಲ್ಲು ಬಿರನೂರ್, ಆಕಾಶ, ಭೀಮಣ್ಣ ಸಂತೋಷ, ವೆಂಕಟೇಶ, ಸಿದ್ರಾಮಪ್ಪ, ವಿಶ್ವರಾಧ್ಯ ಇದ್ದರು.