ಸುರಪುರ: ಅಭಿವೃದ್ಧಿ ಕಾಮಗಾರಿಗಳಿಗಾಗಿ ₹4.71 ಕೋಟಿ ಕ್ರಿಯಾ ಯೋಜನೆಗೆ ಸಮ್ಮತಿ, ಶೋರಾಪುರ ಹೆಸರನ್ನು ಸುರಪುರ ಎಂದು ಬದಲಿಸಲು ಸರ್ಕಾರಕ್ಕೆ ಪ್ರಸ್ತಾವ, ವಾರ್ಡ್ಗಳಿಗೆ ಕಾಮಗಾರಿ ನೀಡಲು ತಾರತಮ್ಯದ ಆರೋಪ...
ಇವು ಸೋಮವಾರ ನಡೆದ ನಗರಸಭೆ ಸಾಮಾನ್ಯ ಸಭೆಯಲ್ಲಿ ಪ್ರಸ್ತಾಪವಾದ ಪ್ರಮುಖ ವಿಷಯಗಳು.
ಅಧ್ಯಕ್ಷತೆ ವಹಿಸಿದ್ದ ನಗರಸಭೆ ಅಧ್ಯಕ್ಷೆ ಸುಜಾತಾ ಜೇವರ್ಗಿ ‘ಎಲ್ಲ 31 ವಾರ್ಡ್ಗಳಲ್ಲಿ ಮೂಲಸೌಕರ್ಯಕ್ಕೆ ಒತ್ತು ನೀಡಲಾಗುತ್ತಿದ್ದು, ಎಲ್ಲ ವಾರ್ಡ್ಗಳಿಗೆ ಸಮಾನ ಆದ್ಯತೆ ನೀಡಲಾಗಿದೆ’ ಎಂದು ತಿಳಿಸಿದರು.
‘ನೀರು, ಸ್ವಚ್ಛತೆ, ರಸ್ತೆ, ಬೀದಿ ದೀಪ ಇನ್ನಿತರ ಸೌಲಭ್ಯಗಳನ್ನು ಪ್ರತಿಯೊಂದು ವಾರ್ಡ್ಗಳಿಗೆ ಒದಗಿಸಲಾಗುತ್ತಿದೆ. ಸದಸ್ಯರು ತಮ್ಮ ವಾರ್ಡ್ಗಳಲ್ಲಿ ಏನೇ ಸಮಸ್ಯೆಗಳಿದ್ದರೆ ತಿಳಿಸಿದರೆ ತಕ್ಷಣ ಸ್ಪಂದಿಸುವುದಾಗಿ’ ಭರವಸೆ ನೀಡಿದರು.
ವಿರೋಧ ಪಕ್ಷದ ನಾಯಕ ರಾಜಾ ಪಿಡ್ಡನಾಯಕ ಮಾತನಾಡಿ, ‘ವಿರೋಧ ಪಕ್ಷದ ಸದಸ್ಯರ ವಾರ್ಡ್ಗಳ ಕಾಮಗಾರಿಗೆ ಅನುದಾನ ನೀಡಲು ತಾರತಮ್ಯ ಮಾಡಲಾಗುತ್ತಿದೆ. ಸರ್ಕಾರದ ಮಾರ್ಗಸೂಚಿಯಂತೆ ಅನುದಾನ ಹಂಚಿಕೆ ಮಾಡಬೇಕು. ಯುಜಿಡಿ ಕಾಮಗಾರಿಯಿಂದ ಅಲ್ಲಲ್ಲಿ ರಸ್ತೆಗಳು ಹದಗೆಡುತ್ತಿದ್ದು ಸರಿಪಡಿಸುವಂತೆ ಸಂಬಂಧಿಸಿದವರಿಗೆ ಸೂಚಿಸಬೇಕು’ ಎಂದರು.
‘ಇಲ್ಲಿಯವರೆಗೂ ನನ್ನ ವಾರ್ಡ್ನಲ್ಲಿ ಕೆಲಸಗಳೆ ಆಗಿಲ್ಲ. ಮೂಲಸೌಕರ್ಯ ಕೂಡ ಕಲ್ಪಿಸಲಾಗುತ್ತಿಲ್ಲ’ ಎಂದು ಕುಂಬಾರಪೇಟೆ ವಾರ್ಡ 1 ರ ಸದಸ್ಯ ಅಯ್ಯಣ್ಣ ಪೂಜಾರಿ ಭಾವುಕರಾಗಿ ಬೇಸರ ವ್ಯಕ್ತಪಡಿಸಿದರು.
‘ಶೋರಾಪುರ’ ಹೆಸರು ಬದಲಾಯಿಸಿ: ಬ್ರಿಟಿಷರು ಮತ್ತು ಹೈದರಾಬಾದ್ ನಿಜಾಮರು ಸರ್ಕಾರಿ ದಾಖಲೆಗಳಲ್ಲಿ ಸುರಪುರ ಎಂದಿದ್ದ ಹೆಸರನ್ನು ಶೋರಾಪುರ ಎಂದು ನಮೂದಿಸಿದರು. ಸರ್ಕಾರಿ ದಾಖಲೆಗಳಲ್ಲಿ ಈಗಲೂ ಶೋರಾಪುರ ಎಂದೇ ಇದೆ. ‘ಸುರಪುರ’ ಎಂದು ಮರು ನಾಮಕರಣ ಮಾಡಬೇಕು ಎಂದು ಸದಸ್ಯ ವೇಣುಮಾಧವನಾಯಕ ಪ್ರಸ್ತಾಪಿಸಿದರು. ಎಲ್ಲ ಸದಸ್ಯರು ಒಪ್ಪಿ ಪ್ರಸ್ತಾವವನ್ನು ಸರ್ಕಾರಕ್ಕೆ ಕಳುಹಿಸಲು ನಿರ್ಧರಿಸಲಾಯಿತು.