ಕಕ್ಕೇರಾ: ಸ್ಥಳೀಯ ಪುರಸಭೆ ವ್ಯಾಪ್ತಿಯ ನೀಲಕಂಠರಾಯನಗಡ್ಡಿಗೆ ಗುರುವಾರ ತಹಶೀಲ್ದಾರ್ ಸುಬ್ಬಣ್ಣ ಜಮಖಂಡಿ ಭೇಟಿ ನೀಡಿ ಗಡ್ಡಿ ಸ್ಥಳಾಂತರ ಕುರಿತು ಗ್ರಾಮಸ್ಥರೊಂದಿಗೆ ಚರ್ಚೆ ನಡೆಸಿದರು.
ಸುರಪುರ ತಹಶೀಲ್ದಾರ್ ಸುಬ್ಬಣ್ಣ ಜಮಖಂಡಿ ಮಾತನಾಡಿ, ಮಳೆಗಾಲ ಪ್ರಾರಂಭವಾಗಿದ್ದು, ಮುಂದಿನ ದಿನಮಾನಗಳಲ್ಲಿ ನದಿಗೆ ಹೆಚ್ಚಿನ ಪ್ರಮಾಣದ ನೀರು ನದಿಗೆ ಹರಿಬಿಡುವ ಸಂಭವ ಇರುವುದರಿಂದ ಯಾರು ನದಿಗೆ ಇಳಿಯಬಾರದು ಎಂದು ಮನವಿ ಮಾಡಿದರು.
ಬೆಂಚಿಗಡ್ಡಿ ಸಮೀಪದ ಜಮೀನಿನಲ್ಲಿ ಸರ್ಕಾರ ನಿವೇಶನಗಳನ್ನು ನಿರ್ಮಿಸಿ ಎಲ್ಲರಿಗೂ ಮನೆಗಳನ್ನು ನೀಡುವುದಾಗಿ ತಿಳಿಸಿದರು.
ಗ್ರಾಮಸ್ಥರು ಒಕ್ಕೊರಲಿನಿಂದ ಮಾತನಾಡಿ, ನೀಲಕಂಠರಾಯನಗಡ್ಡಿ ಗ್ರಾಮ ಸುರಪುರ ತಾಲೂಕಿನ ಕಕ್ಕೇರಾ ಪುರಸಭೆ ವ್ಯಾಪ್ತಿಗೆ ಒಳಪಡುವ ಹಾಗೂ ನದಿ ಈಚೆಯ ಎತ್ತರದ ಪ್ರದೇಶದಲ್ಲಿ ಮನೆಗಳನ್ನು ನಿರ್ಮಿಸಿಕೊಟ್ಟರೆ ನಾವೆಲ್ಲರೂ ಸ್ಥಳಾಂತರಕ್ಕೆ ಒಪ್ಪಿಗೆ ಇದೆ. ನಮಗೆ ಬೆಂಚಿಗಡ್ಡಿ ಸಮೀಪದ ನಿವೇಶನಗಳನ್ನು ನಿರ್ಮಿಸಿದರೆ, ನಮ್ಮ ಗಡ್ಡಿ ಗ್ರಾಮದ ಜಮೀನುಗಳಿಗೆ ತೆರಳಲು ಬಹು ದೂರ ಕ್ರಮಿಸಬೇಕಾಗುತ್ತದೆ.
ಎತ್ತರದ ಪ್ರದೇಶದಲ್ಲಿ ನಿವೇಶನ ಕೊಟ್ಟರೆ ಅನುಕೂಲವಾಗುತ್ತದೆ ಎಂದಾಗ, ತಹಶೀಲ್ದಾರ ಸುಬ್ಬಣ್ಣ ಅವರು, ನದಿ ಈಚೆಗಿರುವ ಸುರಪುರ ಮತ್ತು ಹುಣಸಗಿ ತಾಲ್ಲೂಕಿನ ಸರ್ಕಾರದ ಜಮೀನು ಸರ್ವೆ ಮಾಡಿ ಸರ್ಕಾರದ ಗಮನಕ್ಕೆ ತರಲಾಗುವುದು ಎಂದರು.
ತಹಶೀಲ್ದಾರ ಸುಬ್ಬಣ್ಣ ಜಮಖಂಡಿ ಜೊತೆ ಉಪತಹಶೀಲ್ದಾರ್ ರೇವಪ್ಪ ತೆಗ್ಗಿನಮನಿ, ವಿಠಲ್ ಬಂದಾಳ್, ಬಸವರಾಜ, ಲಕ್ಷ್ಮಣ ಗಡ್ಡಿ, ಕನಕಪ್ಪ ಗಡ್ಡಿ, ಯಂಕಪ್ಪ ಪೂಜಾರಿ ಇದ್ದರು.