ಯಾದಗಿರಿ: ವಿರೋಧ ಪಕ್ಷದ ನಾಯಕರು ಸದನ ಬಹಿಷ್ಕಾರ ಮಾಡಿರುವುದು ಸರಿಯಲ್ಲ. ಅಧಿವೇಶನಕ್ಕೆ ಕೋಟ್ಯಂತರ ರೂಪಾಯಿ ಹಣ ಖರ್ಚು ಮಾಡಲಾಗುತ್ತದೆ. ಆದರೆ, ಇಂಥ ಸದನದಲ್ಲಿ ಗಂಭೀರ ಚರ್ಚೆ ನಡೆಯುವುದರ ಬದಲು ಬಹಿಷ್ಕಾರ ನಡೆದಿರುವುದು ಸರಿಯಲ್ಲ ಎಂದುಆರೋಗ್ಯ ಸಚಿವ ಶ್ರೀರಾಮುಲು ಹೇಳಿದರು.
ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕಾಂಗ್ರೆಸ್–ಜೆಡಿಎಸ್ ಸದನ ಬಹಿಷ್ಕರಿಸಿರುವುದು ಸರಿಯಿಲ್ಲ. ಸದುಪಯೋಗ ಮಾಡಿಕೊಳ್ಳುವುದು ಬಿಟ್ಟು ಈ ರೀತಿ ಮಾಡುವುದು ಸರಿಯಿಲ್ಲ. ಯಾಕೆ ಬಹಿಷ್ಕಾರ ಮಾಡಿದ್ದೀರಿ ಎಂದು ಕೇಳಬೇಕಾಗುತ್ತದೆ ಎಂದರು.
ದೇಶದ್ರೋಹಿಗಳಿಗೆ ಬೆಂಬಲಿಸುವ ಪದ್ಧತಿ ಬಿಟ್ಟು ಹೊರ ಬರಬೇಕು. ಪಾಕಿಸ್ತಾನಕ್ಕೆ ಜೈ ಎನ್ನುವವರಿಗೆ ಕಠಿಣ ಕ್ರಮ ಕೈಗೊಳ್ಳಬೇಕು. ಪಾಕಿಸ್ತಾನಕ್ಕೆ ವಿರುದ್ಧವಾಗಿ ಮಾತನಾಡುವವರ ಮೇಲೆ ಕ್ರಮ ಕೈಗೊಳ್ಳುವಂತ ಕೆಲಸ ಸರ್ಕಾರ ಮಾಡುತ್ತಿದೆ ಎಂದರು.
ಕಳೆದ ವರ್ಷ ಉತ್ತರ ಕರ್ನಾಟಕ ಭಾಗದಲ್ಲಿ ಭೀಕರ ಪ್ರವಾಹ ಅತಿವೃಷ್ಟಿ ಉಂಟಾಗಿ ಮನೆ ಮಠ ಕಳೆದುಕೊಂಡಿದ್ದಾರೆ. ಇಂಥ ವಿಷಯಗಳನ್ನು ಚರ್ಚೆ ಮಾಡಬೇಕಿತ್ತು. ಆದರೆ, ಅಲ್ಲಿ ಆಗಿದ್ದೇ ಬೇರೆ ಎಂದರು.
ಕಲ್ಯಾಣ ಕರ್ನಾಟಕ ಪ್ರದೇಶ ಸಚಿವ ಸ್ಥಾನ ವಂಚಿತವಾಗಿದೆ. ಜಗದೀಶ ಶೆಟ್ಟರ್ ಅವರ ಮನೆಯಲ್ಲಿ ಈ ಭಾಗದ ಅಭಿವೃದ್ಧಿಗಾಗಿ ಚರ್ಚಿಸಲು ಅಲ್ಲಿ ಸೇರಿ ಬಂದಿದ್ದಾರೆ. ಇದಕ್ಕೆ ಬೇರೆ ಅರ್ಥ ಕಲ್ಪಿಸುವುದು ಬೇಡ. 7.5 ಮೀಸಲಾತಿ ವರದಿ ಇನ್ನು ಕೈಸೇರಿಲ್ಲ. ಇದು ಸಿಕ್ಕ ನಂತರ ಸರ್ಕಾರ ತೀರ್ಮಾನ ತೆಗೆದುಕೊಳ್ಳುತ್ತದೆ. ಸುರಪುರ ಶಾಸಕ ರಾಜೂಗೌಡ ಸೇರಿದಂತೆ ಹಿರಿಯ ಶಾಸಕರಿಗೆ ಸಚಿವ ಸ್ಥಾನ ಸಿಗುತ್ತದೆ. ಕಾಯಬೇಕು. ರಾಜೂಗೌಡ ಅವರಿಗೆ ಸಚಿವ ಸ್ಥಾನ ಸಿಗುತ್ತದೆ ಎಂದರು.
ನೂತನ ಜಿಲ್ಲಾಸ್ಪತ್ರೆ ರಸ್ತೆ ನಿರ್ಮಾಣ ಸಂಬಂಧ ಚರ್ಚಿಸಿ ಸೂಕ್ತ ಕ್ರಮ ಕೈಗೊಳ್ಳುತ್ತೇನೆ. ರಾಜ್ಯದಲ್ಲಿ ಕೊರೋನಾ ಸೋಂಕು ಪತ್ತೆಗಾಗಿ ವಿದೇಶದಿಂದ ಬಂದ 153 ಮಂದಿ ರಕ್ತ ಪರೀಕ್ಷೆ ಮಾಡಲಾಗಿದೆ. ಯಾವ ಸೋಂಕು ಕಂಡು ಬಂದಿಲ್ಲ. ಹೀಗಾಗಿ ಭಯಪಡುವ ಅವಶ್ಯಕತೆ ಇಲ್ಲ ಎಂದು ತಿಳಿಸಿದರು. ಜಿಲ್ಲಾಸ್ಪತ್ರೆಗಳಲ್ಲಿ 10 ಬೆಡ್ ಇದಕ್ಕಾಗಿ ತೆಗೆದಿರಿಸಲಾಗಿದೆ ಎಂದು ಮಾಹಿತಿ ನೀಡಿದರು.
ಮಾಜಿ ಸಚಿವ ಎ.ಬಿ.ಮಾಲಕರೆಡ್ಡಿ,ನಗರ ಘಟಕದ ಅಧ್ಯಕ್ಷ ಸುರೇಶ ಅಂಬಿಗೇರಸೇರಿದಂತೆ ಬಿಜೆಪಿ ಮುಖಂಡರು ಸುದ್ದಿಗೋಷ್ಠಿಯಲ್ಲಿ ಇದ್ದರು.ತಮ್ಮ ಮಗಳ ವಿವಾಹದ ಆಮಂತ್ರಣ ಪತ್ರ ನೀಡಲು ಸಚಿವರು ಜಿಲ್ಲೆಗೆ ಬಂದಿದ್ದರು.