ಈ ಮೊದಲು ನರೇಗಾ ಯೋಜನೆಯಲ್ಲಿ ಕೃಷಿ ಹೊಂಡ, ಕುರಿ ದೊಡ್ಡಿ, ಕೆರೆ ಹೂಳೆತ್ತುವುದು, ಎರೆಹುಳು ಘಟಕ, ರಸ್ತೆ ಇತರ ಹಲವಾರು ಕಾಮಗಾರಿಗಳನ್ನು ಕೈಗೊಳ್ಳಲಾಗುತ್ತಿತ್ತು. ಕ್ಷೇತ್ರ ಬದು ಕಾಮಗಾರಿ ಇತ್ತಾದರೂ ಹೆಚ್ಚಿನ ಮಹತ್ವ ನೀಡಿರಲಿಲ್ಲ. ಈ ಬಾರಿ ಕ್ಷೇತ್ರ ಬದುವಿಗೆ ಹೆಚ್ಚಿನ ಪ್ರಾಶಸ್ತ್ಯ ನೀಡಲಾಗಿದೆ. ಕಾಮಗಾರಿಯ ಚಿತ್ರಣ ಬದಲಿಸಲಾಗಿದೆ. ಮೊದಲು ಹೊಲದಲ್ಲಿನ ಮಣ್ಣನ್ನು ಎತ್ತಿ ಒಡ್ಡಿಗೆ ಹಾಕಲಾಗುತ್ತಿತ್ತು. ಈಗ ಒಡ್ಡಿನ ಒಂದು ಅಡಿ ದೂರದಲ್ಲಿ ಒಡ್ಡಿನ ಗುಂಟಾ ಚೌಕಾಕಾರದಲ್ಲಿ ತೆಗ್ಗು ತೋಡಿ ಆ ಮಣ್ಣನ್ನು ಒಡ್ಡು (ಬದು) ವಿಗೆ ಹಾಕಲಾಗುತ್ತದೆ. ಇದು ಸಾಕಷ್ಟು ಫಲ ನೀಡಿದೆ. ಕಳೆದ ಮೂರು ತಿಂಗಳಿಂದ ಸುರಿದ ಉತ್ತಮ ಮಳೆ ಈ ತೆಗ್ಗುಗಳಲ್ಲಿ ನಿಂತುಕೊಂಡಿದೆ.