ಕೆಂಭಾವಿ:ಹೊಟ್ಟೆಪಾಡಿಗಾಗಿ ಮಹಾರಾಷ್ಟ್ರದಿಂದ ಬಂದ ಸುಮಾರು 15 ಒಂಟೆಸವಾರರು9 ಒಂಟೆಗಳೊಂದಿಗೆ ಲಾಕ್ಡೌನ್ ಹಿನ್ನೆಲೆಯಲ್ಲಿ ಕಳೆದ ಎರಡು ತಿಂಗಳಿನಿಂದ ಪಟ್ಟಣದಲ್ಲಿ ಬೀಡುಬಿಟ್ಟಿದ್ದಾರೆ.
ಒಂಟೆಯನ್ನೇ ನಂಬಿ ಜೀವನ ಸಾಗಿಸುತ್ತಿದ್ದ ಅವರ ಬದುಕಿಗೆ ಶನಿವಾರ ಬರಸಿಡಿಲು ಬಡಿದಿದ್ದು, ಒಂದು ಒಂಟೆ ಏಕಾಏಕಿ ಅಸುನೀಗಿದೆ. ಇದರಿಂದ ಅವರಿಗೆ ದಿಕ್ಕು ತೋಚದಂತಾಗಿದೆ.
ವಿಜಯಪುರ ಮೂಲಕ ಪಟ್ಟಣಕ್ಕೆ ಆಗಮಿಸಿದ್ದ ಒಂಟೆ ಸವಾರರತಂಡ ಪಟ್ಟಣದಲ್ಲಿ ಅಲೆಯುತ್ತಾ ಚಿಕ್ಕಮಕ್ಕಳಿಗೆ ಒಂಟೆ ಸವಾರಿ ಮಾಡಿಸಿ ತಮ್ಮ ಜೀವನ ಸಾಗಿಸುತ್ತಿದ್ದರು. ಶನಿವಾರ ಸಾವಿಗೀಡಾದ ಒಂಟೆಯಿಂದ ಗೊಂದಲಕ್ಕೀಡಾದ ವಲಸಿಗರು ಮರಳಿ ತಮ್ಮ ಗ್ರಾಮಕ್ಕೆ ತೆರಳಲು ಅನುಮತಿ ನೀಡುವಂತೆ ಅಧಿಕಾರಿಗಳಿಗೆ ಮೊರೆ ಇಡುತ್ತಿದ್ದಾರೆ. ಅಸುನೀಗಿದ ಒಂಟೆಯನ್ನು ಪುರಸಭೆ ಸಿಬ್ಬಂದಿ ಜೆಸಿಬಿ ಯಂತ್ರದ ಮೂಲಕ ಗುಂಡಿ ತೋಡಿ ಒಂಟೆಯ ಅಂತಿಮ ವಿಧಿವಿಧಾನ ನೆರವೇರಿಸಿದರು.
ಈ ಕುರಿತು‘ಪ್ರಜಾವಾಣಿ’ಜತೆ ಮಾತನಾಡಿದ ಒಂಟೆಸವಾರಸುನೀಲ, ‘ಮಹಾರಾಷ್ಟ್ರಾದ ಸೋಲ್ಲಾಪುರ ಹತ್ತಿರದ ಗ್ರಾಮಕ್ಕೆ ನಾವು ತೆರಳಬೇಕಿದ್ದು, ಉಳಿದ ಎಂಟು ಒಂಟೆಗಳ ಜೊತೆ ಎಂಟು ಜನ ತೆರಳಲು ಪಾಸ್ ಹಾಗೂ ಇನ್ನುಳಿದ ಜನರಿಗೆ ಬಸ್ ಸೌಕರ್ಯ ಒದಗಿಸುವಂತೆ ತಾಲ್ಲೂಕು ಆಡಳಿತಕ್ಕೆ ಮನವಿ ಮಾಡಿದ್ದೇವೆ’ ಎಂದರು.