ಯಾದಗಿರಿ: ಕಳೆದ ವಾರಕ್ಕಿಂತ ಈ ವಾರ ತರಕಾರಿ ದರದಲ್ಲಿ ತುಸು ಇಳಿಕೆಯಾಗಿದೆ. ಆದರೆ, ಒಂದು ತಿಂಗಳಿಂದ ನುಗ್ಗೆಕಾಯಿ ದರ ಗಗನಕ್ಕೇರಿದ್ದು, ಎಲ್ಲಿಯೂ ಸಿಗುತ್ತಿಲ್ಲ. ಮದುವೆ ಸಿಸನ್ ಆರಂಭವಾಗಿದ್ದು, ಸಂಬಾರ್ನಲ್ಲಿ ನುಗ್ಗೆಕಾಯಿ ಘಮ ಇಲ್ಲದಂತೆ ಆಗಿದೆ.
ಟೊಮೆಟೊ ದರ ₹70ರಿಂದ ₹50ಕ್ಕೆ ಇಳಿಕೆಯಾಗಿದೆ. ಇದರ ಜೊತೆಗೆ ಈರುಳ್ಳಿ ದರವೂ ₹5ರಿಂದ ₹10 ಇಳಿಕೆಯಾಗಿದೆ. ಸಗಟು ದರದಲ್ಲಿ ₹35 ಮಾರಾಟವಾದರೆ, ಚಿಲ್ಲರೆ ದರದಲ್ಲಿ ₹40ಕ್ಕೆ ಒಂದು ಕೆ.ಜಿ ದರ ಇದೆ.
ನುಗ್ಗೆಕಾಯಿ ₹300 ಕೆಜಿ ಇದ್ದು, ಈಗ ಎಲ್ಲ ಕಡೆಯೂ ಇಲ್ಲ ಎನ್ನು ಉತ್ತರ ಸಿಗುತ್ತಿದೆ. ಕರಿಬೇವು ₹60ರಿಂದ ₹80 ಕೆಜಿ ಇದೆ. ಈಗ ಹಸಿ ಬಟಾಣಿ ಸಿಜನ್ ಶುರುವಾಗಿದ್ದು, ₹80ರಿಂದ 100 ರ ತನಕ ಒಂದು ಕೇಜಿಗೆ ಮಾರಾಟವಾಗುತ್ತಿದೆ. ಇಷ್ಟು ದಿನಗಳ ಕಾಲ ಹಸಿ ಬಟಾಣಿ ಸಗಟು ವ್ಯಾಪಾರಿಗಳಲ್ಲಿ ಮಾತ್ರ ಸಿಗುತ್ತಿತ್ತು. ಈಗ ಚಿಲ್ಲರೆ ಅಂಗಡಿಗಳಲ್ಲಿಯೂ ಮಾರಾಟಕ್ಕೆ ಇಡಲಾಗಿದೆ.
ಕಳೆದ ಎರಡ್ಮೂರು ದಿನಗಳಲ್ಲಿ ಹೂಕೋಸು ದರ ₹10 ದರ ಹೆಚ್ಚಳವಾಗಿದೆ. ಕಳೆದ ವಾರ ಬದನೆಕಾಯಿ ಶತಕದ ಸಮೀಪ ಬಂದಿತ್ತು. ಆದರೆ, ಈ ವಾರ ಕೆಜಿಗೆ ₹60 ದರವಿದೆ.
ಸೊಪ್ಪುಗಳ ದರ: ಈ ವಾರ ಸೊಪ್ಪುಗಳ ದರ ತುಸು ಇಳಿಕೆಯಾಗಿದೆ. ವಿವಿಧ ಸೊಪ್ಪುಗಳನ್ನು ₹20ಗೆ ಮೂರು ಕಟ್ಟು ನೀಡಲಾಗುತ್ತಿದೆ.
ಮೆಂತೆ ಸೊಪ್ಪು ₹15–20, ಪಾಲಕ್ ಸೊಪ್ಪು ₹20 ಮೂರು, ಪುಂಡಿಪಲ್ಯೆ ಒಂದು ಕಟ್ಟು ₹5, ರಾಜಗಿರಿ ಸೊಪ್ಪು ₹5ಗೆ ಒಂದು ಕಟ್ಟು, ಸಬ್ಬಸಿಗಿ ಒಂದು ಕಟ್ಟು ₹5, ಕೊತಂಬರಿ ಸೊಪ್ಪು ಒಂದು ಕಟ್ಟು ₹15–20, ಪುದೀನಾ ಒಂದು ಕಟ್ಟು ₹15–20 ದರ ಇದೆ.