ಯಾದಗಿರಿ: ‘ವಾಹನಗಳಲ್ಲಿ ಸಂಚಾರ ಮಾಡುವ ಸವಾರರು ಕಡ್ಡಾಯವಾಗಿ ಸಂಚಾರ ನಿಯಮಗಳನ್ನು ಪಾಲಿಸುವುದು ಅಗತ್ಯವಾಗಿದೆ’ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಋಷಿಕೇಶ ಭಗವಾನ್ ಸೋನುವಣೆ ಹೇಳಿದರು.
ನಗರದ ಸರ್ಕಾರಿ ಪದವಿ ಮಹಾವಿದ್ಯಾಲಯದಲ್ಲಿ ಬುಧವಾರ ಪೊಲೀಸ್ ಇಲಾಖೆ ಸಹಯೋಗದಲ್ಲಿ ಕಾಲೇಜು ವಿದ್ಯಾರ್ಥಿಗಳಿಗಾಗಿ ಏರ್ಪಡಿಸಿದ್ದ ಸಂಚಾರ ನಿಯಮಗಳ ಜಾಗೃತಿ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.
‘ಬಹಳಷ್ಟು ಜನರಿಗೆ ಸಂಚಾರ ನಿಯಮಗಳ ಪರಿಕಲ್ಪನೆ ಇಲ್ಲ. ಮನಸ್ಸಿಗೆ ಬಂದಂತೆ ಅಡ್ಡಾ–ದಿಡ್ಡಿ ವಾಹನ ಚಲಾಯಿಸಿ ಅವಘಡಗಳಿಗೆ ಕಾರಣರಾಗುತ್ತಿದ್ದಾರೆ. ಅದಕ್ಕಾಗಿ ಸಂಚಾರ ನಿಯಮಗಳನ್ನು ಅರಿತುಕೊಳ್ಳಬೇಕು. ಇದರಿಂದ ಅಪಘಾತ ತಪ್ಪಿಸಲು ಸಾಧ್ಯವಾಗುತ್ತದೆ’ ಎಂದರು.
‘ದ್ವಿಚಕ್ರ ವಾಹನ ಸವಾರರು ಕಡ್ಡಾಯವಾಗಿ ಹೆಲ್ಮೆಟ್ ಧರಿಸಬೇಕು. ವಾಹನ ಪರವಾನಗಿ ಮತ್ತು ವಿಮೆ ಪತ್ರ ಕಡ್ಡಾಯವಾಗಿ ಹೊಂದಿರಬೇಕು. ಅನೇಕ ಸವಾರರು ಇವುಗಳನ್ನು ಹೊಂದಿಲ್ಲದೆ ವಾಹನ ಚಲಾಯಿಸಿ ಅಪಘಾತಕ್ಕೆ ಈಡಾದಾಗ ತೊಂದರೆ ಅನುಭವಿಸಬೇಕಾಗುತ್ತದೆ’ ಎಂದರು.
ಕಾಲೇಜಿನ ಪ್ರಾಂಶುಪಾಲ ಡಾ.ಸುಭಾಶ್ಚಂದ್ರ ಕೌಲಗಿ ಮಾತನಾಡಿ, ‘ವಿದ್ಯಾರ್ಥಿಗಳು ವಾಹನ ಸವಾರಿ ಮಾಡುವ ಸಂದರ್ಭದಲ್ಲಿ ತುಂಬಾ ಜಾಗರೂಕರಾಗಿ ವಾಹನ ಚಲಾಯಿಸಬೇಕು. ಅವಸರ ಮಾಡದೆ ನಿಧಾನವಾಗಿ ಸಾಗಿದಲ್ಲಿ ಅಪಘಾತ ತಪ್ಪಿಸಬಹುದು’ ಎಂದು ಹೇಳಿದರು.
ಡಿವೈಎಸ್ಪಿ ಯು.ಶರಣಪ್ಪ, ಸಿಪಿಐ ನ್ಯಾಮಗೌಡ, ಸಂಚಾರ ಪಿಎಸ್ಐ ಭೀಮರತ್ನ ಸಜ್ಜನ್ ಇದ್ದರು. ಡಾ.ಜ್ಯೋತಿಲತಾ ತಡಬಿಡಿಮಠ ನಿರೂಪಿಸಿ, ವಂದಿಸಿದರು.