ಹುಣಸಗಿ: ತಾಲ್ಲೂಕಿನ ಕೋಳಿಹಾಳ ಗ್ರಾಮದ ಬಳಿ ಇರುವ ನಾರಾಯಣಪುರ ಎಡದಂಡೆ ಮುಖ್ಯ ಕಾಲುವೆ 52 ಕಿ.ಮೀ ಎಸ್ಕೇಪ್ ಗೇಟ್ನಲ್ಲಿ ಭಾನುವಾರ ಬೆಳಿಗ್ಗೆಯಿಂದ ಸೋರಿಕೆ ಕಂಡು ಬಂದಿದ್ದು, ಕಾಲುವೆ ಕೆಳ ಭಾಗದ ಹುಣಸಗಿ ದೇವಪುರ ಹಿರೇಹಳ್ಳಕ್ಕೆ ಹೆಚ್ಚಿನ ಪ್ರಮಾಣದ ನೀರು ಪೋಲಾಗಿ ಹರಿದು ಹೋಗುತ್ತಿದೆ.
ಬೇಸಿಗೆ ಹಂಗಾಮಿನ ಸಂದರ್ಭದಲ್ಲಿ ನೀರು ಅತ್ಯಮೂಲ್ಯವಾಗಿದ್ದು, ಇದು ಕೃಷ್ಣಾ ಅಚ್ಚುಕಟ್ಟು ಪ್ರದೇಶದ ರೈತರ ಆತಂಕಕ್ಕೆ ಕಾರಣವಾಗಿದೆ.
ಈ ಕುರಿತಂತೆ ನಾರಾಯಣಪುರ ವಲಯದ ಮುಖ್ಯ ಎಂಜಿನೀಯರ್ ಮಂಜುನಾಥ ಅವರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿ ಬಳಿಕ ಮಾತನಾಡಿ ‘ಚಾಲು-ಬಂದ್ ಅವಧಿಯಂತೆ ಕಾಲುವೆಗೆ ಹತ್ತು ದಿನಗಳ ಕಾಲ ನೀರು ಸ್ಥಗಿತಗೊಳಿಸಿದ ಸಂದರ್ಭದಲ್ಲಿ ಅದನ್ನು ತುರ್ತಾಗಿ ದುರಸ್ತಿ ಮಾಡಲಾಗುವುದು. ಬೇಸಿಗೆ ಹಂಗಾಮಿನ ನಿಗದಿತ ನೀರಿನ ಸಮಯದಂತೆ ರೈತರ ಜಮೀನಿಗೆ ನೀರು ಹರಿಸಲಾಗುವುದು’ ಎಂದು ಹೇಳಿದರು.
ಭೀಮರಾಯನಗುಡಿ ಮುಖ್ಯ ಎಂಜಿನಿಯರ್ ಪ್ರೇಮಸಿಂಗ್, ಹುಣಸಗಿ ಕಾರ್ಯನಿರ್ವಾಹಕ ಎಂಜಿನಿಯರ್ ಪ್ರಕಾಶ ಮುದಗಲ್, ಎಇಇ ವಿ.ಎಲ್.ಕಂಬಾರ ಇದ್ದರು.
ವಿಷಯ ತಿಳಿದು ಮಾಜಿ ಶಾಸಕ ರಾಜಾ ವೆಂಕಟಪ್ಪ ನಯಕ ಅವರ ಪುತ್ರ ರಾಜಾ ಸಂತೋಷನಾಯಕ ಅವರು ಮುಖಂಡರೊಂದಿಗೆ ಎಡದಂಡೆ ಕಾಲುವೆ ಎಸ್ಕೇಪ್ ಗೇಟ್ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದರು.
ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿ, ಕಾಲುವೆಗೆ ನೀರು ಹರಿಸಿ ವಾರವೇ ಆಗಿಲ್ಲ. ಆಗಲೇ ಗೇಟ್ ಕಿತ್ತಿದೆ. ಇದರಿಂದ ಕೃಷ್ಣಾ ಅಚ್ಚುಕಟ್ಟು ಪ್ರದೇಶದ ರೈತರು ಆತಂಕ ಪಡುವಂತಾಗಿದೆ. ನಿಗಮದ ಹಿರಿಯ ಅಧಿಕಾರಿಗಳು ಆಗಾಗ ಕಾಲುವೆ ವಸ್ತುಸ್ಥಿತಿ ಹೇಗಿದೆ ಎಂದು ಸಂಚರಿಸಿದಲಿ ಮಾತ್ರ ಸಮಸ್ಯೆ ಏನು ಎಂದು ತಿಳಿಯಲಿದೆ. ಆದರೆ ಸೇವಾ ರಸ್ತೆಗಳು ಬಹುತೇಕ ಹಾಳಾಗಿದ್ದರಿಂದ ಅಧಿಕಾರಿಗಳು ಮಾಹಿತಿ ಪಡೆದುಕೊಳ್ಳುವಲ್ಲಿ ವಿಪಲವಾಗುತ್ತಿದ್ದಾರೆ ಎಂದು ದೂರಿದರು.
ಕೃಷ್ಣಾ ಅಚ್ಚುಕಟ್ಟು ಪ್ರದೇಶದಲ್ಲಿ ಹಿಂಗಾರು ಹಂಗಾಮಿಗೆ ಭತ್ತ ನಾಟಿ ಮಾಡುತ್ತಿರುವದು ಬರದಿಂದ ನಡೆದಿದೆ. ಆದ್ದರಿಂದ ಭತ್ತ, ಶೇಂಗಾ, ಮುಂತಾದ ಬೆಳೆದ ಯಾವುದೇ ರೈತರಿಗೆ ತೊಂದರೆ ಆಗದಂತೆ ಎಸ್ಕೇಪ್ ಗೇಟ್ ತುರ್ತು ಕೆಲಸ ನಡೆಸಿ ದುರಸ್ತಿಗೊಳಿಸಬೇಕು ಎಂದು ಒತ್ತಾಯಿಸಿದರು.
ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಮುದಿಗೌಡ ಕುಪ್ಪಿ, ಮಲ್ಲಣ್ಣ ಸಾಹು ಮುಧೋಳ, ಗೋಪಾಲ ದೊರೆ, ಗ್ರಾ.ಪಂ.ಸದಸ್ಯ ಮೌನೇಶ ಬಳ್ಳರಗಿ, ಅಂಬ್ರೇಶಗೌಡ, ಪ್ರಭು ಸಾಸನೂರು, ಬಸನಗೌಡ ಹುಡೇದ್ ಹಾಗೂ ಸಹಾಯಕ ಇಂಜನಿಯರ್ ಇದ್ದರು.