ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಯಾದಗಿರಿ: 4 ಬಾಲ್ಯ ವಿವಾಹ ತಡೆ

ಅಧಿಕಾರಿಗಳಿಂದ ಬಾಲಕಿಯರ ಪೋಷಕರಿಗೆ ತಿಳಿವಳಿಕೆ
Last Updated 22 ಮೇ 2020, 15:43 IST
ಅಕ್ಷರ ಗಾತ್ರ

ಯಾದಗಿರಿ: ತಾಲ್ಲೂಕಿನ ಕಣೇಕಲ್, ಸೈದಾಪುರ ಮತ್ತು ವಂಕಸಂಬ್ರ ಗ್ರಾಮದಲ್ಲಿ ಎರಡು ಬಾಲ್ಯ ವಿವಾಹ ಸೇರಿದಂತೆ ಜಿಲ್ಲೆಯಲ್ಲಿ ಒಟ್ಟು 4 ಬಾಲ್ಯ ವಿವಾಹಗಳನ್ನು ವಿವಿಧ ಇಲಾಖೆ ಅಧಿಕಾರಿಗಳು ದಾಳಿ ನಡೆಸಿ, ತಡೆದಿದ್ದಾರೆ.

ಮಕ್ಕಳ ಸಹಾಯವಾಣಿ-1098ಗೆ ಬಂದ ದೂರಿನ್ವಯ ಮೇ 20ರಂದು ನಡೆಯಬೇಕಿದ್ದ ಯಾದಗಿರಿ ತಾಲ್ಲೂಕಿನ ಕಣೇಕಲ್ ಗ್ರಾಮದಲ್ಲಿ ಒಂದು ಮತ್ತು ವಂಕಸಂಬ್ರ ಗ್ರಾಮದಲ್ಲಿ 2 ಬಾಲ್ಯವಿವಾಹಗಳನ್ನು ಒಂದು ದಿನ ಮುಂಚಿತವಾಗಿ ಗ್ರಾಮಗಳಿಗೆ ಭೇಟಿ ನೀಡಿದ ಅಧಿಕಾರಿಗಳ ತಂಡ ಬಾಲಕಿಯರನ್ನು ರಕ್ಷಣೆ ಮಾಡಿದೆ. ಅದರಂತೆ ಸೈದಾಪುರದಲ್ಲಿ ಮೇ 24ರಂದು ನಡೆಯಬೇಕಿದ್ದ ಬಾಲ್ಯವಿವಾಹವನ್ನು ಕೂಡ ಮಕ್ಕಳ ಸಹಾಯವಾಣಿ-1098ಗೆ ಬಂದ ದೂರಿನ್ವಯ ಮೇ 20ರಂದು ದಾಳಿ ನಡೆಸಿ ತಡೆದಿದೆ.

‘ದೇಶದಾದ್ಯಂತ ಮಹಾಮಾರಿ ಕೊರೊನಾ ಸಾಂಕ್ರಾಮಿಕ ರೋಗ ವ್ಯಾಪಿಸಿದೆ. ಇದನ್ನು ತಡೆಗಟ್ಟಲು ಸರ್ಕಾರ ಲಾಕ್‍ಡೌನ್ ಘೋಷಿಸಿದ್ದರೂ ಸರ್ಕಾರದ ಆದೇಶ ಉಲ್ಲಂಘನೆ ಜತೆಗೆ ಬಾಲ್ಯವಿವಾಹಕ್ಕೆ ಮುಂದಾಗಿರುವುದು ಕಾನೂನು ಅಪರಾಧ. ಬಾಲ್ಯ ವಿವಾಹ ನಿಷೇಧ ಮತ್ತು ನಿಯಂತ್ರಣ ಕಾಯ್ದೆ-2006ರ ಪ್ರಕಾರ ಹೆಣ್ಣಿಗೆ 18 ವರ್ಷ ಮತ್ತು ಗಂಡಿಗೆ 21 ವರ್ಷ ಪೂರ್ಣಗೊಂಡಿರಬೇಕು ಎಂಬುದಾಗಿ ಬಾಲಕಿಯರ ಪೋಷಕರಿಗೆ ತಿಳಿವಳಿಕೆ ನೀಡಲಾಯಿತು. ನಂತರ ಕೋವಿಡ್-19 ಸಂಬಂಧ ಅಗತ್ಯ ಮುಂಜಾಗ್ರತಾ ಕ್ರಮಗಳೊಂದಿಗೆ ಬಾಲ್ಯವಿವಾಹದಿಂದ ರಕ್ಷಿಸಿದ ಮಕ್ಕಳಿಗೆ ಜಿಲ್ಲಾ ಆಸ್ಪತ್ರೆಯಲ್ಲಿ ಆರೋಗ್ಯ ತಪಾಸಣೆ ಮಾಡಿಸಲಾಯಿತು. ತದನಂತರ ಬಾಲಕಿಯರನ್ನು ಜಿಲ್ಲಾ ಮಕ್ಕಳ ಕಲ್ಯಾಣ ಸಮಿತಿಗೆ ಪುನರ್ವಸತಿಗಾಗಿ ಮತ್ತು ಮುಂದಿನ ಕ್ರಮಕ್ಕಾಗಿ ಒಪ್ಪಿಸಲಾಯಿತು’ ಎಂದು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಉಪನಿರ್ದೇಶಕ ಪ್ರಭಾಕರ ಮಾಹಿತಿ ನೀಡಿದ್ದಾರೆ.

ದಾಳಿಯಲ್ಲಿ ಯಾದಗಿರಿ ಶಿಶು ಅಭಿವೃದ್ಧಿ ಯೋಜನಾಧಿಕಾರಿ ರಾಧಾ ಜಿ.ಮಣ್ಣೂರ, ಸೈದಾಪುರ ಪಿಎಸ್‌ಐ ಸುವರ್ಣಾ, ಎಎಸ್‌ಐ ಭೀಮರಾಯ, ಅಂಗನವಾಡಿ ಮೇಲ್ವಿಚಾರಕಿ ಅನಿತಾ, ಜಿಲ್ಲಾ ಮಕ್ಕಳ ರಕ್ಷಣಾ ಘಟಕದ ಸಿಬ್ಬಂದಿ ದೇವಪ್ಪ, ಸಾಬಯ್ಯ ಎನ್., ಮಕ್ಕಳ ಸಹಾಯವಾಣಿ ಸಿಬ್ಬಂದಿ ನಾಗಪ್ಪ ಗಮಗ ಹಾಗೂ ಹೆಡ್‍ಕಾನ್‍ಸ್ಟೆಬಲ್ ಗೋಪಾಲರೆಡ್ಡಿ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT