ಯರಗೋಳ (ಯಾದಗಿರಿ ಜಿಲ್ಲೆ): ಸುತ್ತಲಿನ ಗ್ರಾಮಗಳಲ್ಲಿ ಬುಧವಾರ ಸುರಿದ ಜೋರು ಮಳೆಯಿಂದಾಗಿ ಮನೆ ಗೋಡೆಗಳು ಕುಸಿದಿವೆ. ತಗ್ಗು, ರಸ್ತೆ, ಚರಂಡಿ, ಹೊಲಗದ್ದೆಗಳಲ್ಲಿ ನೀರು ಹರಿದಾಡುತ್ತಿದೆ. ವಿದ್ಯುತ್ ಸಂಪರ್ಕ ಕಡಿತಗೊಂಡಿದೆ. ಹಳ್ಳಕೊಳ್ಳಗಳಲ್ಲಿ ನೀರು ಸಂಗ್ರಹವಾಗಿದೆ.
ಮಳೆಯಿಂದಾಗಿ ಅಲ್ಲಿಪುರ ಗ್ರಾಮ ಸಂಪೂರ್ಣ ಜಲಾವೃತಗೊಂಡಿತು. ಗ್ರಾಮದಲ್ಲಿ ಸಾಬಣ್ಣ ಭೀಮರಾಯ, ರಾಮಣಗೌಡ ಶರಣಪ್ಪಗೌಡ, ಕಂಚಗಾರಹಳ್ಳಿ ಗ್ರಾಮದಲ್ಲಿಹೊನ್ನಮ್ಮ ಅಯ್ಯಪ್ಪ ಹಾಗೂ ನಾಗಮ್ಮ ದೇವಪ್ಪ, ಚಾಮನಹಳ್ಳಿ ಗ್ರಾಮದಲ್ಲಿ ಸಣ್ಣ ಹಣಮಂತ ಶರಣಪ್ಪ, ಈರಮ್ಮ ಶಂಕರಯ್ಯ ಸ್ವಾಮಿ ಮನೆ ಬಿದ್ದಿವೆ. ಸ್ಥಳಕ್ಕೆ ಉಪ ತಹಶೀಲ್ದಾರ್ ಮಹಮ್ಮದ್ ಶಕೀಲ್, ಕಂದಾಯ ಅಧಿಕಾರಿ ರಾಜಶೇಖರ ಪಾಟೀಲ, ಗ್ರಾಮಲೆಕ್ಕಿಗ ಚನ್ನಬಸಪ್ಪ, ದೇವಿಕಾ ಭೇಟಿ ನೀಡಿ ಪರಿಶೀಲಿಸಿದರು.
ಹೆಡಗಿಮದ್ರ ಗ್ರಾಮದ ಹೊಲಗಳಲ್ಲಿ ನೀರು ನಿಂತು ಸಂಪೂರ್ಣ ಬೆಳೆಗಳು ನಾಶವಾಗಿವೆ. ಹಲವು ಗ್ರಾಮಗಳಲ್ಲಿ ಮನೆಗೊಡೆಗಳು ಕುಸಿದಿವೆ. ಯಾವುದೇ ಜೀವಹಾನಿ ಆಗಿಲ್ಲ ಎಂದು ಸ್ಥಳೀಯರು ‘ಪ್ರಜಾವಾಣಿ’ಗೆ ಮಾಹಿತಿ ನೀಡಿದರು.
ರಸ್ತೆಗಳು ಚರಂಡಿಗಳಂತಾಗಿದ್ದು, ಸಾರ್ವಜನಿಕರಿಗೆ, ವಾಹನ ಸವಾರರಿಗೆ, ಕೃಷಿಕರಿಗೆ, ದಿನಗೂಲಿ ಕಾರ್ಮಿಕರಿಗೆ, ವಿದ್ಯಾರ್ಥಿಗಳಿಗೆ ಜಾನುವಾರುಗಳಿಗೆ ತೊಂದರೆಯಾಗಿದೆ.