ಯಾದಗಿರಿ: ಕೋವಿಡ್ ಲಸಿಕಾರಣ ತಡವಾಗಿ ಆರಂಭಿಸಿದ್ದನ್ನು ನೆಪಮಾಡಿಕೊಂಡು ಡಿಎಚ್ಒ ಅವರು ಮೂವರು ಆರೋಗ್ಯ ನೀರಿಕ್ಷಕರನ್ನು ಅಮಾನತುಗೊಳಿಸಿದ್ದಾರೆ ಎಂದು ಆರೋಪಿಸಿ ಆರೋಗ್ಯ ಇಲಾಖೆ ಸಿಬ್ಬಂದಿ ಶನಿವಾರರಾತ್ರಿ ಡಿಎಚ್ಒ ಕಚೇರಿ ಬಳಿ ದೀಢಿರ್ ಪ್ರತಿಭಟನೆ ನಡೆಸಿದರು.
ಶಹಾಪುರ ತಾಲ್ಲೂಕಿನ ಚಟ್ನಳ್ಳಿ ಪ್ರಾಥಮಿಕ ಆರೋಗ್ಯ ಕೇಂದ್ರದ ಆರೋಗ್ಯ ನಿರೀಕ್ಷಕರಾದ ಸಿದ್ದಯ್ಯ ಕೆ ಪೂಜಾರಿ, ಸಿದ್ರಾಮಪ್ಪ, ಖಾನಾಪುರ ಆರೋಗ್ಯ ನಿರೀಕ್ಷಕ ಸಂಗಣ್ಣ ಸೇಡಂ ಅವರು ಅಮಾನತುಗೊಂಡವರು.
ಡಿ.1ರಂದು ಡಿಎಚ್ಒ ಚಟ್ನಳ್ಳಿ ಆರೋಗ್ಯ ಕೇಂದ್ರಕ್ಕೆ ಬೆಳಿಗ್ಗೆ ಭೇಟಿ ನೀಡಿದ್ದರು. ಆ ವೇಳೆ ಇನ್ನೂ ಲಸಿಕಾರಣ ಪ್ರಾರಂಭಿಸಿಲ್ಲ. ಬೆಳಿಗ್ಗೆ 8 ಗಂಟೆಯಾದರೂ ಲಸಿಕಾರಣ ಪ್ರಾರಂಭಿಸದೇ ಕರ್ತವ್ಯ ನಿರ್ಲಕ್ಷ್ಯತನ ಹಾಗೂ ಬೇಜಾಬ್ದಾರಿ ತೋರಿರುವುದು ಮೇಲ್ನೋಟಕ್ಕೆ ಕಂಡು ಬಂದಿದೆ ಎಂದು ಮೂವರನ್ನು ಅಮಾತನು ಮಾಡಿ ಆದೇಶ ಹೊರಡಿಸಿದ್ದಾರೆ.
ಈ ವೇಳೆ ಮಾತನಾಡಿದ ಮುಖಂಡರು, ‘ಶನಿವಾರ ಬೆಳಿಗ್ಗೆ 1 ಗಂಟೆ ತಡವಾಗಿದ್ದಕ್ಕೆ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಅಧಿಕಾರಿ ಡಾ.ಇಂದುಮತಿ ಕಾಮಶೆಟ್ಟಿ ಅವರು ಮೂವರನ್ನು ಅಮಾನತು ಮಾಡಲಾಗಿದೆ. ಕಳೆದ 10 ತಿಂಗಳಿಂದಲೂ ಹಗಲು ರಾತ್ರಿ ಕರ್ತವ್ಯ ನಿರ್ವಹಣೆ ಮಾಡುತ್ತಿದ್ದರೂ ಅದನ್ನು ಲೆಕ್ಕಿಸದೇ ಶನಿವಾರ ಲಸಿಕಾಕರಣಕ್ಕೆ 1 ಗಂಟೆ ತಡವಾಗಿದ್ದಕ್ಕೆ ಅಮಾನತು ಮಾಡಿದ್ದಾರೆ’ ಎಂದು ಆರೋಪಿಸಿದರು.
‘ಅಮಾನತು ಆದೇಶ ಒಂದು ವಾರದ ಕಾದು ಪರಿಶೀಲನೆ ಮಾಡಲಾಗುವುದು ಎಂದು ಡಿಎಚ್ಒ ಅವರು ತಿಳಿಸಿದ್ದಾರೆ. ಆದರೆ, ಯಾವ ತಪ್ಪಿಗಾಗಿ ಅಮಾನತು ಮಾಡಲಾಗಿದೆ. ಕೂಡಲೇ ಆದೇಶ ರದ್ದುಗೊಳಿಸಬೇಕು’ ಎಂದು ಒತ್ತಾಯಿಸಿದರು.
‘ಏಕಾಏಕಿ ಅಮಾನತು ಮಾಡಿದ್ದಾರೆ. ಒಂದು ಬಾರಿಯೂ ಕಾರಣ ಕೇಳಿ ನೋಟಿಸ್ ನೀಡಿಲ್ಲ. ಹೀಗಾಗಿ ಇದು ಅವೈಜ್ಞಾನಿಕ ಅಮಾನತು ಆದೇಶ. ಅಮಾನತು ಆದೇಶ ರದ್ದು ಮಾಡುವವರಿಗೆ ಅಹೋರಾತ್ರಿ ಧರಣಿ ಮುಂದುವರಿಸುತ್ತೇವೆ’ ಎಂದರು.
ಡಿಎಚ್ಒ ವಿರುದ್ಧ ಧಿಕ್ಕಾರ ಕೂಗಿ ಅಮಾನತು ಆದೇಶಕ್ಕೆ ಆಕ್ರೋಶ ವ್ಯಕ್ತಪಡಿಸಿದರು.
ಈ ವೇಳೆ ಜಿಲ್ಲಾ ಆರೋಗ್ಯ ನಿರೀಕ್ಷಕರ ಸಂಘದ ಅಧ್ಯಕ್ಷ ಮಹಿಪಾಲರೆಡ್ಡಿ, ಶಹಾಪುರ ತಾಲ್ಲೂಕು ಅಧ್ಯಕ್ಷ ಮಲ್ಲಿಕಾರ್ಜುನ ಸೇರಿದಂತೆ ಸುರಪುರ, ಯಾದಗಿರಿ ಸೇರಿದಂತೆ ವಿವಿಧ ಪ್ರಾಥಮಿಕ ಆರೋಗ್ಯ ಕೇಂದ್ರ ಆರೋಗ್ಯ ನಿರೀಕ್ಷಕರು ಪ್ರತಿಭಟನೆಯಲ್ಲಿ ಭಾಗವಹಿಸಿದ್ದರು.
ಈ ಕುರಿತು ಮಾಹಿತಿ ಪಡೆಯಲು ಡಿಎಚ್ಒ ಅವರಿಗೆ ಕರೆ ಮಾಡಿದರೆ ಸಂಪರ್ಕಕ್ಕೆ ಸಿಗಲಿಲ್ಲ.