ಸುರಪುರ: ‘ಅಲೆಮಾರಿ ಹಾಗೂ ಅರೆ ಅಲೆಮಾರಿ ಸ್ಥರದಲ್ಲಿದ್ದ ಗೊಲ್ಲ (ಯಾದವ) ಸಮುದಾಯವನ್ನು ಮುಂದುವರಿದ ಜಾತಿಗಳ ಲೆಕ್ಕಕ್ಕೆ ಸೇರಿಸಿ ಪ್ರವರ್ಗ– 1ರಲ್ಲಿದ್ದ ಸೌಲಭ್ಯಗಳನ್ನು ಹಿಂದಕ್ಕೆ ಪಡೆದುಕೊಳ್ಳಲಾಗಿದೆ’ ಎಂದು ಕರ್ನಾಟಕ ರಾಜ್ಯ ಗೊಲ್ಲ (ಯಾದವ್) ಸಂಘದ ರಾಜ್ಯ ಘಟಕದ ಅಧ್ಯಕ್ಷ ಡಿ.ಟಿ.ಶ್ರೀನಿವಾಸ ಬೇಸರ ವ್ಯಕ್ತಪಡಿಸಿದರು.
ಕಡೇಚೂರು ಕಲ್ಯಾಣ ಮಂಟಪದಲ್ಲಿ ಭಾನುವಾರ ಹಮ್ಮಿಕೊಂಡಿದ್ದ ಕರ್ನಾಟಕ ರಾಜ್ಯ ಗೊಲ್ಲ(ಯಾದವ) ಸಂಘದ ಸದಸ್ಯತ್ವದ ನೋಂದಣಿ ಅಭಿಯಾನ ಹಾಗೂ ಜಿಲ್ಲೆಯ ತಾಲ್ಲೂಕು ಸಂಘಗಳ ಸಮಾವೇಶವನ್ನು ಉದ್ಘಾಟಿಸಿ ಅವರು ಮಾತನಾಡಿದರು.
‘ಗೊಲ್ಲ ಅಭಿವೃದ್ದಿ ನಿಗಮವನ್ನು ಅಸ್ತಿತ್ವಕ್ಕೆ ತರುವಲ್ಲಿ ಗೊಂದಲ ಮೂಡಿಸಿ ಇಲ್ಲಿಯವರೆಗೂ ನಿಗಮವನ್ನು ಘೋಷಿಸದೇ ವಿಳಂಬ ನೀತಿ ಅನುಸರಿಸಲಾಗುತ್ತಿದೆ. ಸರ್ಕಾರ ಪ್ರವರ್ಗ1ರಲ್ಲಿ ಪಡೆಯುತ್ತಿದ್ದ ಸೌಲಭ್ಯವನ್ನು ಈ ಮೊದಲಿನಂತೆ ಮುಂದುವರಿಸಬೇಕು. ತ್ವರಿತವಾಗಿ ಗೊಲ್ಲ ಅಭಿವೃದ್ಧಿ ನಿಗಮವನ್ನು ಘೋಷಿಸಬೇಕು’ ಎಂದು ಒತ್ತಾಯಿಸಿದರು.
ಸಂಘದ ಉಪಾಧ್ಯಕ್ಷ ವಿಠಲ್ ಯಾದವ್ ಪ್ರಾಸ್ತಾವಿಕವಾಗಿ ಮಾತನಾಡಿ, ‘ಸಮಾಜವನ್ನು ಮುಖ್ಯವಾಹಿನಿಗೆ ತರಲು ಈಗಲೂ ಕೂಡಾ ಸಂಘ ಸಾಕಷ್ಟು ಶ್ರಮಿಸುತ್ತಿದ್ದು, ಸಂಘದ ಸದಸ್ಯತ್ವ ಪಡೆಯುವ ಮೂಲಕ ಸಂಘದ ಚಟುವಟಿಕೆಗಳಲ್ಲಿ ತೊಡಗಿಸಿಕೊಂಡು ಸಂಘವನ್ನು ಬಲಪಡಿಸಬೇಕು. ಗೊಲ್ಲ ಸಮಾಜದ ಏಕೈಕ ಮಠವಾಗಿರುವ ಚಿತ್ರದುರ್ಗದ ಯಾದವ ಮಹಾಸಂಸ್ಥಾನದ ಮಠದ ಅಭಿವೃದ್ಧಿಗೂ ಸಹಾಯ ಸಹಕಾರ ನೀಡ ಬೇಕು’ ಎಂದು ಮನವಿ ಮಾಡಿದರು.
ಸಾನ್ನಿಧ್ಯ ವಹಿಸಿದ್ದ ಚಿತ್ರದುರ್ಗ ಯಾದವ ಮಹಾಸಂಸ್ಥಾನದ ಯಾದವಾನಂದ ಸ್ವಾಮೀಜಿ ಆಶೀರ್ವಚನ ನೀಡಿದರು. ಸಮಾಜ ಮುಖಂಡರಾದ ತಿಮ್ಮಯ್ಯ ಪುರ್ಲೆ, ಶಿಕ್ಷಕ ಬಸವರಾಜ ಗುರುಮಠಕಲ್ ಮಾತನಾಡಿದರು.
ಸಂಘದ ಹಿರಿಯ ಉಪಾಧ್ಯಕ್ಷ ಸಿದ್ದಪ್ಪ, ಪ್ರಧಾನ ಕಾರ್ಯದರ್ಶಿ ಉಮಾಶಂಕರ, ಪ್ರಮುಖರಾದ ವೆಂಕೋಬ ಯಾದವ್, ಕೆ.ಸಿ.ರಮೇಶ, ಚಂದಪ್ಪ ಸಾಹುಕಾರ, ಚಂದಪ್ಪ ಯಾದವ್, ಸಾಯಬಣ್ಣ ಪುರ್ಲೆ, ಬಸವರಾಜ ಚಿತ್ರದುರ್ಗ, ಹಣಮಂತ, ಯಮನೂರಪ್ಪ, ಸಂಘದ ಯಾದಗಿರಿ ಜಿಲ್ಲಾ ಘಟಕದ ಅಧ್ಯಕ್ಷ ತಾಯಪ್ಪ ಯಾದವ್ ಇತರರು ಇದ್ದರು.
ಮಾಳಪ್ಪ ನಿರೂಪಿಸಿದರು. ರಾಜೇಂದ್ರ ಡೊಳ್ಳೆ ಸ್ವಾಗತಿಸಿ ವಂದಿಸಿದರು. ಸಮಾವೇಶದಲ್ಲಿ ಯಾದಗಿರಿ ಜಿಲ್ಲೆಯ ವಿವಿಧ ತಾಲ್ಲೂಕುಗಳ ಗೊಲ್ಲ(ಯಾದವ್) ಸಂಘದ ಪದಾಧಿಕಾರಿಗಳು ಇದ್ದರು.