ಸೈದಾಪುರ: ‘ಮಕ್ಕಳು ಸಮಾಜದ ನಿಜವಾದ ಆಸ್ತಿ ಮತ್ತು ಶಕ್ತಿ’ ಎಂದು ಗ್ರಾಮ ಪಂಚಾಯಿತಿ ಉಪಾಧ್ಯಕ್ಷೆ ನೇತ್ರಾವತಿ ತಿಮ್ಮಾರೆಡ್ಡಿ ದೊರೆ ಅಭಿಪ್ರಾಯಪಟ್ಟರು.
ಪಟ್ಟಣದ ಗುರುಕುಲ ವಿದ್ಯಾಪೀಠ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ನಡೆದ ಮಕ್ಕಳ ದಿನಾಚರಣೆ ಕಾರ್ಯಕ್ರಮದಲ್ಲಿ ಮಾತನಾಡಿದರು.
ನೆಹರೂ ದೇಶಕಂಡ ಅದ್ಭುತ ವ್ಯಕ್ತಿಯಾಗಿದ್ದರು. ಅವರು ಮಕ್ಕಳ ಶಿಕ್ಷಣದ ಪ್ರಬಲ ಪ್ರತಿಪಾದಕರಾಗಿದ್ದರು. ಇಂದಿನ ಮಕ್ಕಳು ನಾಳಿನ ಭಾರತವನ್ನು ಸೃಷ್ಟಿಸುತ್ತಾರೆ. ನಾವು ಅವರನ್ನು ಬೆಳೆಸುವ ರೀತಿ ದೇಶದ ಭವಿಷ್ಯವನ್ನು ನಿರ್ಧರಿಸುತ್ತದೆ ಎಂಬ ಕನಸನ್ನು ಕಂಡಿದ್ದರು ಎಂದು ಹೇಳಿದರು.
ಮಕ್ಕಳ ದಿನಾಚರಣೆ ಪ್ರಯುಕ್ತ ವಿವಿಧ ಸ್ಪರ್ಧೆಗಳನ್ನು ಏರ್ಪಡಿಸಿ ವಿಜೇತ ಮಕ್ಕಳಿಗೆ ಬಹುಮಾನಗಳನ್ನು ವಿತರಿಸಲಾಯಿತು. ನಂತರ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಏರ್ಪಡಿಸಲಾಯಿತು.
ಗ್ರಾಮ ಪಂಚಾಯಿತಿ ಸದಸ್ಯ ವಲಿಯೋದ್ದೀನ್, ಮುಖ್ಯಶಿಕ್ಷಕ ಮಲ್ಲಿಕಾರ್ಜುನ ಅರಿಕೇರಕರ್, ಶಾಲೆಯ ಸಹ ಶಿಕ್ಷಕಿಯರಾದ ಮಹಾಲಕ್ಷ್ಮೀ.ಎಂ, ಮಹೇಶ್ವರಿ, ಮರಿಲಿಂಗಮ್ಮ, ಆಸೀಫಾ, ಶೃತಿ ಹಾಗೂ ವಿದ್ಯಾರ್ಥಿಗಳು ಮತ್ತು ಪಾಲಕರು ಸೇರಿದಂತೆ ಇತರರು ಇದ್ದರು.