ಶಹಾಪುರ: ತಾಲ್ಲೂಕಿನ ಹೊತಪೇಟ ಗ್ರಾಮದಲ್ಲಿ ಸಣ್ಣ ನೀರಾವರಿ ಇಲಾಖೆಯ ₹1.50 ಕೋಟಿ ಅನುದಾನದಲ್ಲಿ ನಿರ್ಮಾಣದ ಕೊನೆ ಹಂತದಲ್ಲಿರುವ ಅಣೆಕಟ್ಟು, ₹3.50 ಕೋಟಿ ವೆಚ್ಚದ ಜಲ ಜೀವನ ಮಿಷನ್ ಯೋಜನೆ, ₹17ಲಕ್ಷ ವೆಚ್ಚದಲ್ಲಿ ನಿರ್ಮಿಸುತ್ತಿರುವ ಕೈಲಾಸ ಆಶ್ರಮ ಕಲ್ಯಾಣ ಮಂಟಪ ಕಾಮಗಾರಿಯನ್ನು ಶಾಸಕ ಶರಣಬಸಪ್ಪ ದರ್ಶನಾಪುರ ಗುರುವಾರ ಪರಿಶೀಲನೆ ನಡೆಸಿದರು.
ಬಳಿಕ ಮಾತನಾಡಿದ ಅವರು, ಗುಣಮಟ್ಟದ ಕಾಮಗಾರಿಗಳಿಂದ ಗ್ರಾಮಾಭಿವೃದ್ದಿಗೆ ನೆರವಾಗಲಿದೆ. ಅಲ್ಲದೆ ಗ್ರಾಮದಲ್ಲಿ ಇನ್ನೂ ₹40ಲಕ್ಷ ವೆಚ್ಚದಲ್ಲಿ ಸಿ.ಸಿ ರಸ್ತೆ ಕಾಮಗಾರಿ ನಿರ್ವಹಿಸಲಾಗುವುದು. ಇದರಿಂದ ಜನರ ಮೂಲ ಸೌಲಭ್ಯಗಳಿಗೆ ಮುಕ್ತಿ ದೊರಕಿದಂತೆ ಆಗುತ್ತದೆ ಎಂದರು.
ಸಣ್ಣನೀರಾವರಿ ಇಲಾಖೆಯ ಆಶ್ರಯದಲ್ಲಿ ಹಳ್ಳಕ್ಕೆ ಅಣೆಕಟ್ಟು ನಿರ್ಮಿಸುವ ಕಾರ್ಯ ಕೊನೆ ಹಂತಕ್ಕೆ ಬಂದಿದೆ. ಸಂಗ್ರಹವಾದ ನೀರನ್ನು ಕೃಷಿಗೆ ಬಳಸಿಕೊಳ್ಳಲು ಅನುಕೂಲವಾಗುತ್ತದೆ. ಅಂತರ್ಜಲ ಹೆಚ್ಚಳಕ್ಕೆ ಸಹಕಾರಿಯಾಗುತ್ತದೆ. ಕೈಲಾಸ ಆಶ್ರಮದಲ್ಲಿ ಕಲ್ಯಾಣಮಂಟಪ ನಿರ್ಮಾಣದಿಂದ ಭಕ್ತರಿಗೆ ಉಪಯೋಗವಾಗಲಿದೆ. ಜಲ ಜೀವನ ಯೋಜನೆಯ ಅನುಷ್ಠಾನದಿಂದ ಪ್ರತಿಯೊಂದು ಮನೆ ಮನೆಗೆ ಕುಡಿಯುವ ನೀರಿನ ಸೌಲಭ್ಯ ದೊರಕಲಿದೆ. ಗ್ರಾಮದ ಅಭಿವೃದ್ದಿಯಲ್ಲಿ ಆಯಾ ಗ್ರಾಮಸ್ಥರ ಸಹಕಾರ ಪಾತ್ರ ಮುಖ್ಯವಾಗಿದೆ ಎಂದರು.
ಗ್ರಾಮದ ಸರ್ಕಾರಿ ಪ್ರೌಢಶಾಲೆಗೂ ಭೇಟಿ ನೀಡಿ ಅಗತ್ಯ ಸೌಲಭ್ಯಗಳನ್ನು ನೀಡಲಾಗುವುದು ಎಂದು ಶಾಲಾ ಸಿಬ್ಬಂದಿಗೆ ಭರವಸೆ ನೀಡಿದರು.