ಸುರಪುರ (ಯಾದಗಿರಿ ಜಿಲ್ಲೆ): ನಗರ ಠಾಣೆಯ ಕಾನ್ಸ್ಟೆಬಲ್ ದಯಾನಂದ ಜಮಾದಾರ ಅವರು ತಮ್ಮ ಸಂಬಳದಲ್ಲಿ ತಿಂಗಳಿಗೆ ₹ 3 ಸಾವಿರ ಹಣವನ್ನುನಿರ್ಗತಿಕರ ಹಸಿವು ನೀಗಿಸುವುದಕ್ಕಾಗಿ ಬಳಸುತ್ತಿದ್ದಾರೆ.
ದಯಾನಂದ ಅವರು 2016ರಲ್ಲಿ ಪೊಲೀಸ್ ಕಾನ್ಸ್ಟೆಬಲ್ ಆಗಿ ಸುರಪುರ ಠಾಣೆಗೆ ನೇಮಕವಾದರು. ನಗರದಲ್ಲಿನ ನಿರ್ಗತಿಕರನ್ನು ಗುರುತಿಸಿ, ಕರ್ತವ್ಯದ ಸಮಯ ಮುಗಿದ ಮೇಲೆ ಊಟ, ಹಣ್ಣು, ನೀರು ತೆಗೆದುಕೊಂಡು ಹೋಗಿ ಕೊಡುತ್ತಾರೆ. ಊಟ ಮಾಡಲು ಸಾಧ್ಯವಾಗದವರಿಗೆ ತಾವೇ ಊಟ ಮಾಡಿಸುತ್ತಾರೆ.
ಲಾಕ್ಡೌನ್ ದಿನಗಳಲ್ಲಿ ನಿರ್ಗತಿಕರು, ಮಾನಸಿಕ ಅಸ್ವಸ್ಥರು, ಭಿಕ್ಷುಕರು ಹೀಗೆ ಅನೇಕರು ಊಟವಿಲ್ಲದೆ ಪರದಾಡುತ್ತಿದ್ದಾರೆ. ಹೀಗಾಗಿ ತಮ್ಮ ಸಂಬಳದ ಹೆಚ್ಚಿನ ಹಣವನ್ನು ಖರ್ಚು ಮಾಡಿ ಅವರಿಗೆ ಊಟ ನೀಡುತ್ತಿದ್ದಾರೆ.
ಬಡತನದ ಅನುಭವ:ಕಲಬುರ್ಗಿ ಸಮೀಪದ ಭೂಪಾಲ ತೆಗನೂರ ಗ್ರಾಮದ ದಯಾನಂದ ಅವರು ಕಡು ಬಡತನದಲ್ಲಿ ಬೆಳೆದವರು. ಎಷ್ಟೋ ಬಾರಿ ಊಟವಿಲ್ಲದೇ ಮಲಗಿದ್ದೂ ಇದೆ. ಓದುವ ದಿನಗಳಲ್ಲೇ ತರಕಾರಿ ವ್ಯಾಪಾರ ಮಾಡಿದ್ದರು. ತಾಯಿಯೂ ಇವರಿಗೆ ಸಾಥ್ ನೀಡಿದ್ದರು.
ದುಡಿಯುತ್ತಲೇ ವಿದ್ಯಾಭ್ಯಾಸ ಮುಗಿಸಿದ ದಯಾನಂದ ಬಿ.ಎ. ಪಾಸ್ ಮಾಡಿದರು. ಪೊಲೀಸ್ ಕಾನ್ಸ್ಟೆಬಲ್ ಹುದ್ದೆಯನ್ನು ಮೊದಲ ಪ್ರಯತ್ನದಲ್ಲೇ ಪಡೆದರು. ನೌಕರಿಗೆ ಸೇರಿದ ಮೇಲೆ ಬಡವರ ಹಸಿವು ನೀಗಿಸಲು ನಿರ್ಧರಿಸಿ, ತಮ್ಮ ಮೊದಲ ಸಂಬಳದಿಂದಲೇ ಬಡವರಿಗಾಗಿ ಹಣ ತೆಗೆದಿರಿಸುತ್ತಿದ್ದಾರೆ. ಪತಿಯ ಸೇವೆಗೆ ಪತ್ನಿ ಸಾಥ್ ನೀಡುತ್ತಿದ್ದಾರೆ.
‘ದಯಾನಂದ ಅವರಂತಹ ಮಾನವೀಯ ಕಳಕಳಿಯುಳ್ಳ ಕಾನ್ಸ್ಟೆಬಲ್ ನಮ್ಮ ಠಾಣೆಯಲ್ಲಿ ಸೇವೆ ಸಲ್ಲಿಸುತ್ತಿರುವುದು ಇಡೀ ಇಲಾಖೆಗೆ ಹೆಮ್ಮೆಯ ವಿಷಯ’ ಎಂದು ಡಿವೈಎಸ್ಪಿ ವೆಂಕಟೇಶ ಉಗಿಬಂಡಿ, ಇನ್ಸ್ಪೆಕ್ಟರ್ ಸಾಹೇಬಗೌಡ ಪಾಟೀಲ ಹರ್ಷ ವ್ಯಕ್ತಪಡಿಸುತ್ತಾರೆ.