ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅಮ್ಮನಘಟ್ಟ ನೆಲೆ: ವನ್ಯಜೀವಿಗಳಿಗೆ ನೀರಿನ ಸೆಲೆ

ವೃಕ್ಷಲಕ್ಷ ಆಂದೋಲನ ಹಮ್ಮಿಕೊಂಡ ‘ಅಮ್ಮನ ಘಟ್ಟ ಉಳಿಸಿ’ ಅಭಿಯಾನ
Last Updated 24 ಮಾರ್ಚ್ 2018, 12:23 IST
ಅಕ್ಷರ ಗಾತ್ರ

ಶಿವಮೊಗ್ಗ: ಅಮ್ಮನಘಟ್ಟ ಜೇನುಕಲ್ಲಮ್ಮ ದೇವಾಲಯದ ಪುಷ್ಕರಣಿ, ಕೆರೆ, ಪುನಶ್ಚೇತನಗೊಂಡ ಪರಿಣಾಮ ವನ್ಯಜೀವಿಗಳಿಗೆ ಬೇಸಿಗೆಯಲ್ಲೂ ಕುಡಿಯಲು ನೀರು ಲಭ್ಯವಾಗಿದೆ ಎಂದು ಅನಂತ ಹೆಗಡೆ ಅಶೀಸರ ಸಂತಸ ವ್ಯಕ್ತಪಡಿಸಿದರು.

ಹೊಸನಗರ ತಾಲ್ಲೂಕಿನ ಅಮ್ಮನಘಟ್ಟದಲ್ಲಿ ವೃಕ್ಷಲಕ್ಷ ಆಂದೋಲನ ಎರಡು ದಿನ ಹಮ್ಮಿಕೊಂಡಿದ್ದ ‘ಅಮ್ಮನ ಘಟ್ಟ ಉಳಿಸಿ’ ಅಭಿಯಾನದಲ್ಲಿ  ಶುಕ್ರವಾರ ಅವರು ಮಾತನಾಡಿದರು.

ಅಮ್ಮನಘಟ್ಟಕ್ಕೆ ರಸ್ತೆ ಇದೆ. ಈ ರಸ್ತೆಗೆ ಡಾಂಬರು ಹಾಕಿ ಅಭಿವೃದ್ಧಿ ಮಾಡಲು ಸಂಘಟನೆಯ ವಿರೋಧವಿಲ್ಲ. ಆದರೆ, ರಸ್ತೆ ವಿಸ್ತರಣೆ ನೆಪದಲ್ಲಿ ಮರ ಕಡಿಯುವುದು, ಅರಣ್ಯ ನಾಶ ಮಾಡುವುದಕ್ಕೆ ವಿರೋಧವಿದೆ ಎಂದರು.

ಅಮ್ಮನಘಟ್ಟ ಭಕ್ತರ, ಚಾರಣಿಗರ ತಾಣ. ಇದು ಸೂಕ್ಷ್ಮ ಅರಣ್ಯಪ್ರದೇಶ ಎನ್ನುವುದನ್ನು
ಯಾರೂ ಕಡೆಗಣಿಸಬಾರದು. ಇಲ್ಲಿ ಪ್ರವಾಸೋದ್ಯಮಕ್ಕೆ ಬೇಕಾಬಿಟ್ಟಿ ಅವಕಾಶ ಕಲ್ಪಿಸಬಾರದು. ರೆಸಾರ್ಟ್‌, ಪ್ರವಾಸಿ ಮಂದಿರ ನಿರ್ಮಾಣಕ್ಕೆ
ಅವಕಾಶ ನೀಡಬಾರದು. ಈ ಪ್ರದೇಶದ ಎಲ್ಲ ಕೆರೆ, ಅರಣ್ಯ ಪುನಃಶ್ಚೇತನಗೊಳಿಸಲು ಸರ್ಕಾರ ಹಣಕಾಸಿನ ನೆರವು ನೀಡಬೇಕು ಎಂದು ಒತ್ತಾಯಿಸಿದರು.

ವೃಕ್ಷಲಕ್ಷ ಆಂದೋಲನ ತಂಡ ಅಮ್ಮನಘಟ್ಟ ಪರಿಸ್ಥಿತಿ ಕುರಿತು ಸಮೀಕ್ಷಾ ವರದಿ ಸಿದ್ಧಪಡಿಸಲಿದೆ. ಇಲ್ಲಿನ ಜೀವ ವೈವಿಧ್ಯದ ಉಳಿವಿಗೆ ಕ್ರಿಯಾ ಯೋಜನೆ ರೂಪಿಸಿ ಸರ್ಕಾರಕ್ಕೆ ಸಲ್ಲಿಸಲಿದೆ ಎಂದು ಮಾಹಿತಿ ನೀಡಿದರು.

ಅರಣ್ಯ ವಿಜ್ಞಾನಿ ಡಾ.ಕೇಶವ ಕೊರ್ಸೆ ಮಾತನಾಡಿ, ‘ಶರಾವತಿ ಜಲಾಶಯದ ನೀರಿನ ಮೂಲಗಳಿಗೆ ಅಮ್ಮನಘಟ್ಟವೇ ಪ್ರಮುಖ
ಜಲಮೂಲ. ಇಲ್ಲಿನ ಎಲೆ ಉದುರಿಸುವ ಕಾಡು ಹಳ್ಳಿಗಳ ರೈತರ ಬದುಕಿಗೆ ಆಧಾರ. ಇಲ್ಲಿ ಜೇನುನೊಣಗಳ ಪಡೆ ಬಂದರೆ ಅದು ಸಮೃದ್ಧಿಯ ಸಂಕೇತ. ಈ ಪ್ರದೇಶದಲ್ಲಿ ಇನ್ನಷ್ಟು ಅಧ್ಯಯನ ನಡೆಸಬೇಕು. ವಿನಾಶದ ಅಂಚಿನ ಸಸ್ಯ ಸಂರಕ್ಷಣಾ ಕಾರ್ಯಕ್ರಮ ಅವಶ್ಯ’ ಎಂದು ಅಭಿಪ್ರಾಯಪಟ್ಟರು.

ಗ್ರಾಮ ಭಾರತಿ ಸಂಚಾಲಕ ರವಿ ಹನಿಯ ಮಾತನಾಡಿ, ‘ಕಾನು ಅಭಿವೃದ್ಧಿ ಯೋಜನೆ ಜಾರಿ ಮಾಡಬೇಕು. ಕಲ್ಲು ಗಣಿಗಾರಿಕೆ ನಡೆದ ಪ್ರದೇಶದಲ್ಲಿ ಹಸಿರು ಹೆಚ್ಚಿಸಲು ಕ್ರಮ ಕೈಗೊಳ್ಳಬೇಕು’ ಎಂದು ಆಗ್ರಹಿಸಿದರು.

ಹೊಸನಗರ ವಲಯ ಅರಣ್ಯ ಅಧಿಕಾರಿ ಶ್ರೀಜಯೇಶ್ ಮಾತನಾಡಿ, ‘ಅಮ್ಮನಘಟ್ಟದ ಸುತ್ತಲಿನ 575 ಹೆಕ್ಟೇರ್ ಪ್ರದೇಶವನ್ನು ‘ದೇವರ ಕಾಡು’
ಎಂದು 2010-11ರಲ್ಲೇ ಗುರುತಿಸಲಾಗಿದೆ. ರಕ್ಷಣಾ ಕಂದಕ, ನೀರು ಇಂಗಿಸುವ ಗುಂಡಿಗಳು,
ಸಸಿ ನೆಡುವ ಕಾರ್ಯ, 4 ಕೆರೆಗಳಿಗೆ
ಜೀವ ತುಂಬಿಸುವ ಕೆಲಸ ಪೂರ್ಣಗೊಂಡಿದೆ. ಕಾಡಿನ ಬೆಂಕಿಯಿಂದ ರಕ್ಷಣೆಗೆ ಅಗತ್ಯ ಕ್ರಮ ಕೈಗೊಳ್ಳಬೇಕಿದೆ’ ಎಂದರು.

ಅಮ್ಮನಘಟ್ಟ ದೇವಾಲಯ ಸಮಿತಿ ಕಾರ್ಯದರ್ಶಿ ಗುರುರಾಜ ಅವರು ಸಂವಾದ ಸಭೆಯ ಅಧ್ಯಕ್ಷತೆ ವಹಿಸಿದ್ದರು. ಪರಿಸರ ಹೋರಾಟಗಾರ ದಾಮೋದರ್ ‘ಅಮ್ಮನಘಟ್ಟ ಉಳಿಸಿ’ ಪ್ರಸ್ತಾವ ಮಂಡಿಸಿದರು.

ಬಾಣಿಗಾದ ಅರಣ್ಯ ಸಮಿತಿ ಅಧ್ಯಕ್ಷ ನಿಜಲಿಂಗಪ್ಪ ದೊಡ್ಡಮನಿ, ಕೇಶವಪುರದ ಜಯಮ್ಮ, ಮಂಜುನಾಥ ಕಾರಕ್ಕಿಯ, ಸ್ವಾಮಿ, ಅಶೋಕ ಕುಮಾರ, ಹೊಸಳ್ಳಿಯ ಲಿಂಗಪ್ಪ, ಕೋಡೂರಿನ ಸುಧೀರ ಹರತಾಳು, ಶಿವಕುಮಾರ ಮಾತನಾಡಿದರು.

ಬಾಣಿಗಾ, ಮಜ್ವಾನಾ, ಕಾರಕ್ಕಿ, ಹೊಸಳ್ಳಿ, ಕೋಡೂರು, ಬ್ರಹ್ಮೇಶ್ವರ, ಮಾವಿನಹೊಳೆಗಳಿಗೆ ತಂಡ ಭೇಟಿ ನೀಡಿತು. ಕಾಡಿನ ಕೆರೆಗಳ
ಸಮೀಕ್ಷೆ, ಗ್ರಾಮ ಅರಣ್ಯ ಸಮಿತಿಗಳ ಜೊತೆ ಸಂವಾದ, ಜಾಗೃತಿ ಸಭೆಗಳನ್ನು ನಡೆಸಿತು.
**
ಜೇನು ಕಲ್ಲಮ್ಮನ ಬೆಟ್ಟದಲ್ಲಿ ಜೇನು ಸಮೃದ್ಧವಾದರೆ ನಾಡಿಗೆ ನೆಮ್ಮದಿ ಸಿಗುತ್ತದೆ. ಹಾಗಾಗಿ, ಅಲ್ಲಿನ ವನ-ಜಲ ಸಂವರ್ಧನೆಗೆ ಆದ್ಯತೆ ನೀಡಬೇಕು.</p>

– ಡಾ.ಕೇಶವ ಕೊರ್ಸೆ, ಸಸ್ಯಶಾಸ್ತ್ರಜ್ಞ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT