ಶನಿವಾರ, 13 ಜೂನ್ 2026
×
ADVERTISEMENT

NEET ಪ್ರಶ್ನೆಪತ್ರಿಕೆ ಸೋರಿಕೆ; ವೈದ್ಯರಾಗುವ ಕನಸಿಗೆ ತಣ್ಣೀರು– ಆಕಾಂಕ್ಷಿಗಳ ಮಾತು

Published : 13 ಮೇ 2026, 6:08 IST
Last Updated : 13 ಮೇ 2026, 6:08 IST
ADVERTISEMENT
ಫಾಲೋ ಮಾಡಿ
Comments
ನೀಟ್ ಪ್ರಶ್ನೆ ಪತ್ರಿಕೆಯ ಸೋರಿಕೆ ಬೆನ್ನಲ್ಲೇ, ಸರ್ಕಾರವು ಮರುಪರೀಕ್ಷೆ ನಡೆಸಲು ತೆಗೆದುಕೊಂಡಿರುವ ನಿರ್ಧಾರ ಸ್ವಾಗತಾರ್ಹವಾಗಿದೆ. ಈ ಪರೀಕ್ಷೆಗೆ ವಿದ್ಯಾರ್ಥಿಗಳು ಹೆಚ್ಚು ಶ್ರಮವಹಿಸುತ್ತಾರೆ. ಅಂತಹ ಪ್ರಾಮಾಣಿಕ ವಿದ್ಯಾರ್ಥಿಗಳಿಗೆ ಇದರಿಂದ ಅನ್ಯಾಯವಾಗಿದೆ. ಇದು ಪರೀಕ್ಷೆಯ ದೋಷವಲ್ಲ, ಸಂಪೂರ್ಣ ಶಿಕ್ಷಣ ವ್ಯವಸ್ಥೆಯ ಮೇಲಿನ ನಂಬಿಕೆಯ ಪ್ರಶ್ನೆಯಾಗಿದೆ. ಉನ್ನತ ಅಧಿಕಾರಿಗಳನ್ನು ತನಿಖೆಗೆ ಒಳಪಡಿಸಬೇಕು. ಇಂತಹ ಆರೋಪ ಈ ಮೊದಲು ಕೇಳಿಬಂದಿದ್ದವು. ಈಗ ಮತ್ತೊಮ್ಮೆ ಇಂತಹದ್ದೇ ಆರೋಪ ಮುನ್ನೆಲೆಗೆ ಬಂದಿರುವುದು ಗಂಭೀರ ಸಂಗತಿಯಾಗಿದೆ.  
– ಪ್ರದೀಪ್ ಕುಮಾರ್ ಎನ್.ಬಿ. ಕಾರ್ಯದರ್ಶಿ, ವಿದ್ಯಾವಾಹಿನಿ ಸಮೂಹ, ರಾಜ್ಯ ಉಪಾಧ್ಯಕ್ಷ ಖಾಸಗಿ ಶಾಲಾ ಸಂಘ
ವೈದ್ಯನಾಗುವುದು ನನ್ನಕನಸು. ಹೀಗಾಗಿ 2026ರ ನೀಟ್ ಪರೀಕ್ಷೆಗೆ 2 ವರ್ಷಗಳ ಸತತ ತಯಾರಿ ಮಾಡಿ, ಪರೀಕ್ಷೆಯನ್ನು ಉತ್ತಮವಾಗಿ ಮಾಡಿದ್ದೆ. ಎನ್‌ಟಿಎ ಬಿಡುಗಡೆ ಮಾಡಿದ ‘ಕೀ ಆನ್ಸರ್’ ಪ್ರಕಾರ ಅಂದಾಜು 690 ಅಂಕ ಸಿಗುವ ಸಾಧ್ಯತೆ ಇತ್ತು. ಮಾತ್ರವಲ್ಲದೆ, 1,000 ಒಳಗೆ ರ್‍ಯಾಂಕ್ ಬರುತ್ತದೆ ಎಂಬ ಭರವಸೆಯೂ ಇತ್ತು. ಆದರೆ ಪ್ರಶ್ನೆಪತ್ರಿಕೆ ಸೋರಿಕೆಯಾಗಿರುವ ಸುದ್ದಿ ಕೇಳಿ ಅಘಾತವಾಗಿದೆ. ವ್ಯವಸ್ಥೆಯ ವೈಫಲ್ಯದಿಂದ ಲಕ್ಷಾಂತರ ಮಂದಿ ಪ್ರಾಮಾಣಿಕ ವಿದ್ಯಾರ್ಥಿಗಳ ಕನಸು ನುಚ್ಚು ನೂರಾಗಿದೆ.
ಪೃಥ್ವಿ ಕೆ, ನೀಟ್‌ ಪರೀಕ್ಷಾರ್ಥಿ 
ಈ ಬಾರಿಯ ನೀಟ್ ಪರೀಕ್ಷೆಯಲ್ಲಿ ಸುಮಾರು 650 ಅಂಕಗಳನ್ನು ಗಳಿಸುತ್ತೇನೆ ಎಂಬ ಭರವಸೆ ಇತ್ತು. ಆದರೆ ಪ್ರಶ್ನೆ ಪತ್ರಿಕೆ ಸೋರಿಕೆಯ ಆರೋಪದ ಮೇಲೆ ಮರು ಪರೀಕ್ಷೆ ಘೋಷಿಸಿದ್ದು, ನಿಜಕ್ಕೂ ಬೇಸರ ತಂದಿದೆ. ವರ್ಷವಿಡೀ ಕಷ್ಟ ಪಟ್ಟು ಓದಿ, ತಯಾರಿ ಮಾಡಿ, ಯಾರೋ ಮಾಡಿದ ತಪ್ಪಿಗೆ ಪ್ರಾಮಾಣಿಕ ವಿದ್ಯಾರ್ಥಿಗಳು ಬಲಿಯಾಗಿದ್ದೇವೆ. ಈ ಘಟನೆ ವಿದ್ಯಾರ್ಥಿಗಳನ್ನು ಮಾನಸಿಕವಾಗಿ ಕುಗ್ಗಿಸುತ್ತದೆ. ಅಲ್ಲದೆ ಆತ್ಮವಿಶ್ವಾಸಕ್ಕೂ ಪೆಟ್ಟು ನೀಡುತ್ತದೆ. ವಿದ್ಯಾರ್ಥಿಗಳ ಕನಸಿಗಳ ಜೊತೆ ಆಟವಾಡಬೇಡಿ.
ಆರವ್ ಹೆಗ್ಡೆ, ನೀಟ್‌ ಪರೀಕ್ಷಾರ್ಥಿ
2026ರ ನೀಟ್, ಮರು ಪರೀಕ್ಷೆ ಎಂಬ ವಿಷಯ ಕೇಳಿ ಅಸಮಾಧಾನ ಮತ್ತು ನಿರಾಶೆಯಾಯಿತು. 2 ವರ್ಷ ನಾನು ಸತತ ಪ್ರಯತ್ನ ಮಾಡಿ ಪರೀಕ್ಷೆಯನ್ನು ಬರೆದಿದ್ದೆ. ಉತ್ತಮ ಅಂಕ  ಸಿಗುವ ಭರವಸೆಯೂ ಇತ್ತು. ಆದರೆ ಸೋರಿಕೆ ನಿಜಕ್ಕೂ ಬಡ ಮಕ್ಕಳು ಹಾಗೂ ಪ್ರತಿಭಾವಂತರಿಗೆ ನುಂಗಲಾರದ ತುತ್ತು. ಈ ಕೃತ್ಯಕ್ಕೆ ಕಾರಣವಾದವರ ವಿರುದ್ಧ ಸೂಕ್ತ ಕ್ರಮ ತೆಗೆದುಕೊಳ್ಳಬೇಕು.   
ಗಿರಿಜಾ ಎನ್‌. ನೀಟ್‌ ಪರೀಕ್ಷಾರ್ಥಿ
ನೀಟ್ ಪರೀಕ್ಷೆಯ ಪ್ರಶ್ನೆ ಪತ್ರಿಕೆ ಸೋರಿಕೆ ವಿದ್ಯಾರ್ಥಿಗಳಲ್ಲಿ ಮಾತ್ರವಲ್ಲದೆ, ಪೋಷಕರಲ್ಲಿಯೂ ಭವಿಷ್ಯದ ಬಗ್ಗೆ ಆತಂಕ ಸೃಷ್ಟಿಸಿದೆ. ಕಠಿಣ ಪರಿಶ್ರಮದಿಂದ ಉತ್ತಮ ಅಂಕ ಗಳಿಸುವ ನಿರೀಕ್ಷೆ ಇತ್ತು. ಇಂತಹ ಕೃತ್ಯಗಳು ಇದೇ ಮೊದಲೇನಲ್ಲ. ಭಾರತದಂತಹ ಪ್ರಜಾಪ್ರಭುತ್ವ ದೇಶದಲ್ಲಿ ಇಂತಹ ಕೃತ್ಯಗಳನ್ನು ತಡೆಯಲಾಗುತ್ತಿಲ್ಲವಲ್ಲ ಎಂಬುದು ನಿಜಕ್ಕೂ ಬೇಸರದ ಸಂಗತಿ.  
ನಿಹಾರಿಕ ಎ,  ನೀಟ್‌ ಪರೀಕ್ಷಾರ್ಥಿ
ವಿದ್ಯಾರ್ಥಿಗಳು ಅತ್ಯಂತ ಶ್ರಮಪಟ್ಟು ನೀಟ್‌ ಪರೀಕ್ಷೆಗಾಗಿ ಸಿದ್ಧತೆ ಮಾಡಿ ಬರೆದಿದ್ದರು.‌ ಉತ್ತಮ ನಿರ್ವಹಣೆ ತೋರಿರುವುದರಿಂದ ಒಳ್ಳೆಯ ರ್‍ಯಾಂಕ್ ಬರುತ್ತದೆ ಎಂಬ ಭರವಸೆಯಲ್ಲಿ ಇದ್ದರು. ಈಗ ಪ್ರಶ್ನೆಪತ್ರಿಕೆ ಸೋರಿಕೆಯಾಗಿದೆ ಎಂಬುದು ತಿಳಿದಾಗ ಅವರಿಗಾಗುವ ಆಘಾತಕ್ಕೆ ಯಾರು ಹೊಣೆ? ಜೆಇಇ ಪರೀಕ್ಷೆಯಂತೆ ಇದನ್ನೂ ಕಂಪ್ಯೂಟರೀಕೃತ ಮಾಡುವುದು ಒಳ್ಳೆಯದಲ್ಲವೇ? ಧೂರ್ತರು ಮಾಡುವ ಅನಾಚಾರಗಳಿಂದ ಮುಗ್ಧ, ಪ್ರಾಮಾಣಿಕ ವಿದ್ಯಾರ್ಥಿಗಳು ಮಾನಸಿಕವಾಗಿ ಒತ್ತಡ ಅನುಭವಿಸುತ್ತಾರೆ. ಅಂಥವರಿಗೆ ಕಠಿಣ ಶಿಕ್ಷೆ ಆಗಲೇಬೇಕು. ಮುಂದೆಂದೂ ಇಂತಹ ತಪ್ಪು ಆಗಬಾರದು.
ಡಾ. ಆರತಿ ಪಟ್ರಮೆ, ಉಪನ್ಯಾಸಕಿ
ಈ ಬಾರಿಯ ನೀಟ್ ಪರೀಕ್ಷೆಯನ್ನು ತುಂಬಾ ಚೆನ್ನಾಗಿ ಬರೆದಿದ್ದೆ. 660ಕ್ಕೂ ಹೆಚ್ಚು ಅಂಕ ಸಿಗುವ ಭರವಸೆ ಇತ್ತು. ಆದರೆ ಮರು ಪರೀಕ್ಷೆ ಮಾಡುತ್ತೀರುವುದು ಬೇಸರದ ಸಂಗತಿಯಾಗಿದೆ. ಡಾಕ್ಟರ್ ಆಗಬೇಕೆಂಬುದು ನನ್ನ ಕನಸು. ತಪ್ಪಿತಸ್ಥರಿಗೆ ಕಠಿಣ ಶಿಕ್ಷೆಯಾಗಬೇಕು.
ರಚನ . ಎಸ್‌, ನೀಟ್‌ ಪರೀಕ್ಷಾರ್ಥಿ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT