ನಾಡಿನ ಹಲವೆಡೆ ಅಭಿನಯ ತರಬೇತಿ ಶಾಲೆಗಳಿದ್ದರೂ ರಂಗಭೂಮಿ, ಚಲನಚಿತ್ರ ಮತ್ತು ಕಿರುತೆರೆ ಹೀಗೆ ಮೂರು ಕ್ಷೇತ್ರಗಳಲ್ಲಿ ತರಬೇತಿ ನೀಡುವ ಸಂಸ್ಥೆಗಳ ಕೊರತೆ ಇದೆ. ಇದು ಒಂದು ವರ್ಷದ ಪರಿಪೂರ್ಣ ಕೋರ್ಸ್ ಆಗಿದ್ದು ಕೇವಲ ನಟ– ನಟಿಯನ್ನು ಮಾತ್ರವಲ್ಲದೆ ಮೂರೂ ಕ್ಷೇತ್ರಕ್ಕೆ ಸಲ್ಲುವ ಕೌಶಲವನ್ನು ಕಲಿಸಲಿದೆ. ಭಾರತೀಯ ವಿದ್ಯಾ ಭವನವು ಕೆ.ವಿ. ಸುಬ್ಬಣ್ಣ ಆಪ್ತ ರಂಗ ಮಂದಿರದ ಸಹಯೋಗದಲ್ಲಿ ಈ ಒಂದು ವರ್ಷದ ಡಿಪ್ಲೋಮಾ ಕೋರ್ಸ್ ರೂಪಿಸಿದೆ. ಸ್ವತಃ ರಂಗ ಕ್ಷೇತ್ರದ ಪರಿಣತರು ಎನ್ನಿಸಿಕೊಂಡಿರುವವರು ಬಿ.ಆರ್. ಗೋಪಿನಾಥ್ ಈ ಕೋರ್ಸ್ನ ಸಂಪೂರ್ಣ ಹೊಣೆ ಹೊತ್ತಿದ್ದು, ಜಾಗತಿಕ ಮನ್ನಣೆ ಪಡೆದ ಗಿರೀಶ್ ಕಾಸರವಳ್ಳಿ, ಪಿ. ಶೇಷಾದ್ರಿ, ರಾಷ್ಟ್ರಪ್ರಶಸ್ತಿ ಪುರಸ್ಕೃತ ನಟ ಎಚ್.ಜಿ. ದತ್ತಾತ್ರೇಯ ಹೊಸ ಪೀಳಿಗೆಯ ಬೇಡಿಕೆಯ ತಾರೆಯರಾದ ಹರಿಪ್ರಿಯ, ಶೃತಿ ಹರಿಹರನ್, ಮಾಧ್ಯಮ ಕ್ಷೇತ್ರದ ಪರಿಣತ ಅಬ್ದುಲ್ ರೆಹಮಾನ್ ಪಾಷಾ, ವಿವಿಧ ಕ್ಷೇತ್ರದ ಪರಿಣತರಾದ ಎನ್.ಎಸ್. ಶ್ರೀಧರ ಮೂರ್ತಿ, ಶ್ರೀಪತಿ ಮಂಜಲಬೈಲು, ರಾಷ್ಟ್ರಪ್ರಶಸ್ತಿ ಪುರಸ್ಕೃತ ಸಂಗೀತ ನಿರ್ದೇಶಕ ಬಾಪು ಪದ್ಮನಾಭ್ ಮೊದಲಾದವರು ಇಲ್ಲಿ ತರಬೇತಿ ನೀಡಲಿದ್ದಾರೆ.